ಯೋಗರಾಜ್ ಭಟ್ ನಿರ್ದೇಶಿಸಿ ಗಣೇಶ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ಮುಂಗಾರು ಮಳೆ’ ಚಿತ್ರಕ್ಕೆ 18 ವರ್ಷ ತುಂಬಿದ ಸಂಭ್ರಮ. ಹೀಗಾಗಿ ಚಿತ್ರತಂಡ ಆ ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ನಿರ್ಮಿಸಿ, ಭಟ್ಟರು ನಿರ್ದೇಶಿಸಿರುವ ‘ಮನದ ಕಡಲು’ ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು. ‘ಹೂ ದುಂಬಿಯ ಕಥೆಯ ಬರೆದವನ್ಯಾರು’ ಹಾಡಿಗೆ ಕಲಾವಿದರ ಹೊರತಾದ ಅಂದಿನ ಮುಂಗಾರು ಮಳೆ ತಂಡ ಸಾಕ್ಷಿಯಾಗಿತ್ತು.
‘ಮುಂಗಾರು ಮಳೆ’ ಬಿಡುಗಡೆಯಾಗಿ ಹದಿನೆಂಟು ವರ್ಷವಾಯಿತು ಎಂಬುದನ್ನು ನಂಬಲಿಕ್ಕೆ ಆಗುತ್ತಿಲ್ಲ. ನಿನ್ನೆ ಮೊನ್ನೆ ಆದ ಹಾಗಿದೆ. ‘ಮನದ ಕಡಲು’ ಚಿತ್ರಕ್ಕಾಗಿ ಆ ಹಳೆಯ ತಂಡ ಮತ್ತೆ ಒಂದಾಗಿದೆ. ಕೃಷ್ಣಪ್ಪನವರ ಬಳಿಗೆ ಕಥೆ ತೆಗೆದುಕೊಂಡು ಹೋಗಿ ಸ್ಟಾರ್ ನಟರನ್ನು ನಾಯಕನಾಗಿ ಸೂಚಿಸಿದೆ. ಹೊಸಬರಿಗೆ ಅವಕಾಶ ಕೊಡುವುದಿದ್ದರೆ ಮಾತ್ರ ಈ ಚಿತ್ರ ಮಾಡಿ ಎಂದರು. ಹೀಗಾಗಿ ‘ಮುಂಗಾರು ಮಳೆ’ಯಂತೆ ಇಲ್ಲಿಯೂ ಹೊಸ ಕಲಾವಿದರಿಗೆ ಅವಕಾಶ ನೀಡಿರುವೆ. ‘ಹೂ ದುಂಬಿಯ ಕಥೆಯ ಬರೆದವನ್ಯಾರು’ ಎಂಬ ಸಾಲನ್ನು ನಿರ್ಮಾಪಕರ ಬಳಿ ಹೇಳಿದಾಗ, ನಿನ್ನಂತವರೇ ಯಾರೋ ತಲೆಕೆಟ್ಟವರು ಬರೆದಿರುತ್ತಾರೆ ಎಂದು ಹಾಸ್ಯದ ಚಟಾಕಿ ಹಾರಿಸಿದರು. ಈ ಹಾಡು ಹುಟ್ಟಿದ್ದು ನಿರ್ಮಾಪಕರ ತೋಟದ ಮನೆಯಲ್ಲಿ. ಕಂಪೋಸ್ ಆಗಿದ್ದು ನನ್ನ ಆಫೀಸ್ನ ಮೇಲಿರುವ ಸ್ಟುಡಿಯೋದಲ್ಲಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಸಂಚಿತ್ ಹೆಗಡೆ ಗಾಯನ, ಮುರಳಿ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ’ ಎಂದು ಹಾಡು ಹುಟ್ಟಿದ ಬಗೆಯನ್ನು ವಿವರಿಸಿದರು ಯೋಗರಾಜ್ ಭಟ್.
ಈ ಹಿಂದೆ ‘ಫಿಸಿಕ್ಸ್ ಟೀಚರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸುಮುಖಗೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್ ಜೋಡಿಯಾಗಿದ್ದಾರೆ. ‘ಸಿನಿಮಾ ಎಂಬುದೇ ಜೂಜಾಟ. ಸಿನಿಮಾ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತೇವೆ ಎಂದರೆ ಹೊಸಬರಿಗೆ ಮಾಡೋಣ ಎಂದು ನಿರ್ದೇಶಕರಿಗೆ ಹೇಳಿದೆ. ಯಾವುದೇ ಕೊರತೆ ಬಾರದ ಹಾಗೆ ಒಂದೊಳ್ಳೆ ಸಿನಿಮಾ ಮಾಡಿದ್ದೀನಿ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು. ‘ಮುಂಗಾರು ಮಳೆ’ ಬಳಿಕ ಎರಡು ಸಿನಿಮಾ ಮಾಡಿ ಕೈ ಸುಟ್ಟುಕೊಂಡೆ. ಸಿನಿಮಾ ನನ್ನ ಮುಖ್ಯ ಬಿಸಿನೆಸ್ ಅಲ್ಲ. ಮಾಡಿದರೆ ಒಂದೊಳ್ಳೆ ಸಿನಿಮಾ ಮಾಡಬೇಕು ಎಂಬ ಹಂಬಲವಷ್ಟೆ. ಈ ಸಿನಿಮಾ ಯಶಸ್ವಿಯಾಗುತ್ತದೆಂಬ ಭರವಸೆಯಿದೆ’ ಎಂದರು ನಿರ್ಮಾಪಕ ಇ.ಕೃಷ್ಣಪ್ಪ.
ದತ್ತಣ್ಣ, ಶಿವಧ್ವಜ್, ಸೂರಜ್ ಮುಂತಾದವರು ಚಿತ್ರದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಚಿತ್ರಗ್ರಹಣವಿದೆ. ಪ್ರೇಮಿಗಳ ದಿನಕ್ಕೆ ಚಿತ್ರ ಬಿಡುಗಡೆ ಮಾಡಲು ತಂಡ ಆಲೋಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.