ADVERTISEMENT

ರವಿಚಂದ್ರನ್‌ ಮಗ ಮನೋರಂಜನ್ ಬಳಿ ಕ್ಷಮೆ ಯಾಚಿಸಿದ ನಿರ್ದೇಶಕ ಮನು!

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 15:55 IST
Last Updated 28 ಆಗಸ್ಟ್ 2019, 15:55 IST
ಮನೋರಂಜನ್ ರವಿಚಂದ್ರನ್
ಮನೋರಂಜನ್ ರವಿಚಂದ್ರನ್   

‘ಪ್ರಾರಂಭ’ ಚಿತ್ರದ ನಿರ್ದೇಶಕ ಮನು ಕಲ್ಯಾಡಿ ಅವರು, ಚಿತ್ರದ ನಾಯಕ ನಟ ಮನೋರಂಜನ್ ರವಿಚಂದ್ರನ್ ಅವರಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಅದೂ, ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ!

‘ಏಕೆ, ಏನಾಯ್ತು?! ಏನಾದರೂ ಎಡವಟ್ಟು ಆಯಿತಾ’ ಎಂಬ ಪ್ರಶ್ನೆಗಳು ಬೇಡ. ಚಿತ್ರದ ಟೀಸರ್‌ ಕೊನೆಯಲ್ಲಿ ಒಂದು ದೃಶ್ಯವಿದೆ. ಅದರಲ್ಲಿ ನಾಯಕಿಯು, ನಾಯಕನ ತುಟಿಗೆ ಮುತ್ತು ಕೊಡುತ್ತಾಳೆ. ಇದನ್ನು ವೀಕ್ಷಿಸಿದ ಕೆಲವರು ಕಾರ್ಯಕ್ರಮದಲ್ಲಿ ‘ಮನೋರಂಜನ್ ಅವರಿಂದ ತುಟಿಗೆ ಕಿಸ್‌ ಮಾಡಿಸಿದ್ದೀರಲ್ಲಾ’ ಎಂಬ ಪ್ರಶ್ನೆಯನ್ನು ನಿರ್ದೇಶಕರ ಎದುರು ಇಟ್ಟರು.

ಆಗ ತುಸು ನಾಚಿಕೊಂಡ ನಿರ್ದೇಶಕರು, ‘ಸಾರಿ, ಕಿಸ್‌ ಮಾಡಿಸಿದ್ದಕ್ಕೆ ಮನೋರಂಜನ್ ಸರ್‌ ಅವರಲ್ಲಿ ಸಾರಿ ಕೇಳುತ್ತೇನೆ’ ಎಂದರು. ಅಷ್ಟೇ ಅಲ್ಲ, ‘ರವಿ ಸರ್ ಮಗ ಅಲ್ವಾ’ ಎಂಬ ಮಾತನ್ನೂ ತಮ್ಮ ಉತ್ತರದ ಜೊತೆಯಲ್ಲೇ ಸೇರಿಸಿದರು.

ADVERTISEMENT

ಮನು ನಿರ್ದೇಶನದ ಮೊದಲ ಸಿನಿಮಾ ‘ಪ್ರಾರಂಭ’. ಅವರ ಅಣ್ಣ ಜಗದೀಶ್ ಕಲ್ಯಾಡಿ ಇದರ ನಿರ್ಮಾಪಕ. ‘ಅಣ್ಣನ ಬಳಿ ಸಿನಿಮಾ ಕಥೆ ಹೇಳಿದೆ. ಅವರಿಗೆ ಇಷ್ಟವಾಯಿತು. ದುಡ್ಡು ಹಾಕಲು ಒಪ್ಪಿಗೆ ನೀಡಿದರು. ಮನೋರಂಜನ್‌ ಕೂಡ ಸಿನಿಮಾದ ನಾಯಕ ನಟನಾಗಿ ಅಭಿನಯಿಸಲು ಒಪ್ಪಿಕೊಂಡರು. ಸಿನಿಮಾ ಕೆಲಸ ಶುರು ಆಯಿತು’ ಎಂದು ‘ಪ್ರಾರಂಭ’ದ ಆರಂಭದ ದಿನಗಳ ಕುರಿತು ವಿವರಿಸಿದರು ಮನು.

ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಆದಷ್ಟು ಬೇಗೆ ತೆರೆಯ ಮೇಲೆ ಬರಲಿದೆ ಎಂದು ಮನು ಭರವಸೆ ನೀಡಿದರು. ‘ಇದು ಎಲ್ಲರೂ ನೋಡಬಹುದಾದ ಸಿನಿಮಾ’ ಎಂದರು. ‘ಮನೋರಂಜನ್ ಅವರನ್ನು ಮನಸ್ಸಲ್ಲಿ ಇರಿಸಿಕೊಂಡೇ ಚಿತ್ರದ ಕಥೆ ಸಿದ್ಧಪಡಿಸಿದ್ದೆ. ರವಿ ಸರ್ ಅಂತೂ ನನ್ನ ಮೊದಲ ಸಿನಿಮಾದಲ್ಲಿ ನಟಿಸಲು ಒಪ್ಪಲಿಕ್ಕಿಲ್ಲ. ಹಾಗಾಗಿ ಮನೋರಂಜನ್ ಅವರನ್ನು ಒಪ್ಪಿಸಿದೆ’ ಎಂದರು.

ಮನೋರಂಜನ್ ಅವರು ನಿಭಾಯಿಸಿರುವ ಪಾತ್ರ ಕಲಾವಿದನದ್ದು. ‘ಎಪ್ಪತ್ತು ದಿನ ಶೂಟಿಂಗ್ ಮಾಡಿದ್ದೇವೆ. ಲವ್ ಫೇಲ್ ಆದಾಗ ಸಾಮಾನ್ಯವಾಗಿ ಮದ್ಯಪಾನ ಮಾಡಲು ಆರಂಭಿಸುತ್ತಾರೆ. ಆದರೆ ಈ ಚಿತ್ರದ ನಾಯಕ ಪ್ರೀತಿ ವಿಫಲವಾದಾಗ ಏನು ಮಾಡುತ್ತಾನೆ ಎಂಬುದೇ ಸಿನಿಮಾದ ಸೊಗಸು’ ಎಂದರು ಮನೋರಂಜನ್.

ನಾಯಕಿ ಕೀರ್ತಿ ಅವರಿಗೆ ಇದು ಮೊದಲ ಸಿನಿಮಾ. ‘ನಟಿಸುವಾಗ ನನಗೆ ಇದು ನನ್ನ ಮೊದಲ ಸಿನಿಮಾ ಅನಿಸಲಿಲ್ಲ. ನನ್ನದು ವೃತ್ತಿಯಲ್ಲಿರುವ ಹುಡುಗಿ ಪಾತ್ರ’ ಎಂದರು ಕೀರ್ತಿ. ಸಿನಿಮಾದಲ್ಲಿ ಸರ್ಪ್ರೈಸ್ ಲವ್ ಸ್ಟೋರಿ ಒಂದಿದೆ‌. ಅದು ಸಿನಿಮಾ ನೋಡಿದ ನಂತರ ಗೊತ್ತಾಗುತ್ತೆ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.