ನಟಿ ಮಾನುಷಿ ಚಿಲ್ಲರ್
ಮುಂಬೈ: ಉದ್ಯೋಗಸ್ಥ ಮಹಿಳೆಯರನ್ನು ಅಗೌರವದಿಂದಲೂ ಹಾಗೂ ತಿರಸ್ಕಾರದ ಮನೋಭಾವನೆಯಿಂದ ಈ ಸಮಾಜ ನೋಡುತ್ತದೆ. ಆದರಲ್ಲಿಯೂ ಮನರಂಜನಾ ಕ್ಷೇತ್ರದಲ್ಲಿ ಅತಿಹೆಚ್ಚು ಎಂದು ನಟಿ ಮಾನುಷಿ ಚಿಲ್ಲರ್ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಹಿಳೆಯರನ್ನು ಅವಕಾಶವಾದಿಗಳು ಎಂದು ಕರೆಯುವ ಸಮಾಜದಲ್ಲಿ ಪುರುಷರ ವಿಷಯಕ್ಕೆ ಬಂದಾಗ ಆ ದೃಷ್ಟಿಕೋನ ಬದಲಾಗುತ್ತದೆ. ಅವರನ್ನು (ಪುರುಷರು) ಕಠಿಣ ಪರಿಶ್ರಮಿ ಮತ್ತು ಪ್ರತಿಭಾನ್ವಿತರು ಎಂದು ಕರೆಯುಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಸ್ತ್ರೀದ್ವೇಷಿ ಮನಸ್ಥಿತಿಯು ಮಹಿಳೆಯ ಯಶಸ್ಸನ್ನು ಅವಳ ಪರಿಶ್ರಮಕ್ಕೆ ಸಿಕ್ಕ ಫಲವೆಂದು ಹೇಳದೆ, ಪುರುಷರ ಪ್ರೋತ್ಸಾಹದಿಂದ ಸಾಧ್ಯವಾದದ್ದು ಎಂದು ಹೇಳುವುದು ಸುಲಭವಾಗಿದೆ. ವಾಸ್ತವವಾಗಿ ಇಂತಹ ಮೂರ್ಖತನದ ಕಾಮೆಂಟ್ಗಳನ್ನು ನಾನು ಯಾವಾಗಲೂ ನಿರ್ಲಕ್ಷಿಸಿತ್ತೇನೆ. ಆದರೆ ಕೆಲಸ ಮಾಡುವ ಮಹಿಳೆಯರು, ವಿಶೇಷವಾಗಿ ಮನರಂಜನಾ ಕ್ಷೇತ್ರದ ಮಹಿಳೆಯರು ಅಗೌರವ ಮತ್ತು ತಿರಸ್ಕಾರದ ಮನೋಭಾವನೆಯಿಂದ ಕೂಡಿದ ಚರ್ಚೆಗೆ ಒಳಪಡುವುದನ್ನು ನಾನು ಸ್ವತಃ ನೋಡಿದ್ದೇನೆ' ಎಂದು ಮಾನುಷಿ ಚಿಲ್ಲರ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
'ನಾನು ಶಿಕ್ಷಿತ ವಾತಾವರಣದಲ್ಲಿ ಬೆಳೆದಿದ್ದೇನೆ. ಲಿಂಗ ತಾರತಮ್ಯಕ್ಕೆ ಆಸ್ಪಾದ ನೀಡದೆ, ನಾವೆಲ್ಲರೂ ಸಮಾನರು ಎಂಬ ಭಾವನೆ ಹೊಂದಿದ್ದೇನೆ' ಎಂದಿದ್ದಾರೆ.
2017ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಬಳಿಕ ಮಾನುಷಿ ಚಿಲ್ಲರ್, ಅಕ್ಷಯ್ ಕುಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.