ADVERTISEMENT

ಚಿತ್ರ ನಿರ್ಮಾಪಕ ಡಾ.ಕಶ್ಯಪ್‌ ದಾಕೋಜು ಅವರ ‘ಮರಣ ಮಹೋತ್ಸವ’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 11:25 IST
Last Updated 10 ಅಕ್ಟೋಬರ್ 2022, 11:25 IST
‘ಮರಣ ಮಹೋತ್ಸವ’ ಕೃತಿಯನ್ನು ಹಿರಿಯ ನಿರ್ಮಾಪಕ ಚಿನ್ನೇಗೌಡ ಇತ್ತೀಚೆಗೆ ಬಿಡುಗಡೆಗೊಳಿಸಿದರು. 
‘ಮರಣ ಮಹೋತ್ಸವ’ ಕೃತಿಯನ್ನು ಹಿರಿಯ ನಿರ್ಮಾಪಕ ಚಿನ್ನೇಗೌಡ ಇತ್ತೀಚೆಗೆ ಬಿಡುಗಡೆಗೊಳಿಸಿದರು.    

ಬೆಂಗಳೂರು: ಚಿತ್ರ ನಿರ್ಮಾಪಕ ಡಾ.ಕಶ್ಯಪ್‌ ದಾಕೋಜು ಅವರ ‘ಮರಣ ಮಹೋತ್ಸವ’ ಕಾದಂಬರಿ ಬಿಡುಗಡೆ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಿತು.

ಮಂಡಳಿಯ ಗೌರವ ಕಾರ್ಯದರ್ಶಿ ಸುಂದರರಾಜ್, ಅಧ್ಯಕ್ಷ ಭಾ.ಮ.ಹರೀಶ್‍ ಮತ್ತು ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ಪುಸ್ತಕ ಬಿಡುಗಡೆ ಮಾಡಿದರು.

ಸುಂದರರಾಜ್‌ ಮಾತನಾಡಿ, ‘ಇದನ್ನು ರಚಿಸಿದ ಡಾ.ಕಶ್ಯಪ್ ದಾಕೋಜುರವರು ಮೂಲತಃ ಚಿತ್ರ ನಿರ್ಮಾಪಕರು. ಇದುವರೆಗೂ ಇವರು ನಿರ್ಮಿಸಿದ 5 ಚಲನಚಿತ್ರಗಳ ಅನುಭವದಿಂದ ಈ ರೀತಿಯ ಚಿತ್ರ ಕಥೆಯ (script) ರೂಪದಲ್ಲಿ ಬರೆದಿರುವುದು ಬಹುಶಃ ಇದೇ ಮೊದಲಬಾರಿ ಇರಬಹುದು. ಒಬ್ಬ ನಿರ್ಮಾಪಕರೇ ತಮಗಿರುವ ಚಿತ್ರ ನಿರ್ಮಾಣದ ಅನುಭವದಿಂದ ತಾವೇ ಒಂದು ಇಂತಹ ಸ್ವಾರಸ್ಯಕರವಾದ ವಿಷಯದ ಬಗ್ಗೆ ಚಿತ್ರಕಥೆ ರೂಪದಲ್ಲಿ ಸೃಷ್ಟಿಸಿದ್ದಾರೆ. ಇದು ಬಹಳ ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಅಧ್ಯಕ್ಷರಾದ ಭಾ.ಮ.ಹರೀಶ್ ಮಾತನಾಡಿ, ‘ಇನ್ನು ಮುಂದೆ ಈ ಮಂಡಳಿಯನ್ನು ಬರಿಯ ಚಿತ್ರ ನಿರ್ಮಾಣಗಳಿಗೆ ಸೀಮಿತಗೊಳಿಸದೆ, ಪುಸ್ತಕ ಬಿಡುಗಡೆಯಂತಹ ಕಾರ್ಯಗಳಿಗೂ ಅವಕಾಶ ನೀಡಲಾಗುವುದು’ ಎಂದರು.

ಲೇಖಕ ಡಾ.ಕಶ್ಯಪ್ ದಾಕೋಜು ಮಾತನಾಡಿ, ಮಾನವ ಹುಟ್ಟಿದಾಗಲೇ, ಆತನ ಸಾವಿನ ಮುಹೂರ್ತ ತಿಳಿದುಬಿಟ್ಟರೆ ಏನಾಗಬಹುದೆಂಬ ವಿಷಯವನ್ನಿಟ್ಟುಕೊಂಡು ಹೆಣೆದಿರುವ ಕಥೆಯಿದು. ಅಮೆರಿಕಾದಲ್ಲಿ ವಿಜ್ಞಾನಿ ಆಗಿರುವ ಕಥಾನಾಯಕ ಬ್ರಹ್ಮ, ಹಲವಾರು ಪ್ರಾಣಿಗಳ ಮೇಲಿನ ಸಂಶೋಧನೆಯಿಂದ ಮಾನವನ ಸಾವಿನ ದಿನ, ಘಳಿಗೆಗಳನ್ನು ಕಂಡುಕೊಳ್ಳುತ್ತಾನೆ. ಮಾನವರಮೇಲೆ ಈ ಪ್ರಯೋಗಕ್ಕಾಗಿ ತನ್ನ ತಂದೆಯನ್ನೇ ವಸ್ತುವಾಗಿಟ್ಟುಕೊಳ್ಳುವ ಸಂದರ್ಭ ಬರುತ್ತದೆ. ತನ್ನ ಮಗನಿಂದಲೆ, ತನ್ನ ತಂದೆಯ ಸಾವಿನ ಮುಹೂರ್ತ ಇಟ್ಟಾಗ ನಡೆಯುವ ಸನ್ನಿವೇಶಗಳ ಈ ನನ್ನ ಪ್ರಯತ್ನದಲ್ಲಿ, ಕುತೂಹಲ, ಹಾಸ್ಯ, ಭಾವನಾತ್ಮಕತೆ, ಮಾನವ ಸಂಬಂಧಗಳು, ತತ್ವಜ್ಞಾನ ಎಲ್ಲವೂ ತೆರೆದುಕೊಳ್ಳುತ್ತದೆ’ಇದೊಂದು ಹೊಸ ಪ್ರಯೋಗ ಎನ್ನಬಹುದು ಎಂದು ಹೇಳಿದರು.

ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.