ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಶ್ವಿನಿ ನಕ್ಷತ್ರ'ದ ಮುಯೂರಿ ಕ್ಯಾತರಿ ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಜೆ.ಪಿ ನಗರದ ಶ್ರೀ ತಿರುಮಲಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿಶುಕ್ರವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಲಾಕ್ಡೌನ್ ಅವಧಿಯಾಗಿದ್ದರಿಂದ ಮದುವೆಯಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು.
ವಿವಾಹ ಮಹೋತ್ಸವದಲ್ಲಿ ಮಾಂಗಲ್ಯಧಾರಣೆ ಸಮಯದ ವಿಡಿಯೊ ತುಣುಕವನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಮಯೂರಿ, ‘ಯೆಸ್, ನಾನು ಮದುವೆಯಾಗಿದ್ದೇನೆ. 12/06/2020. ಹತ್ತು ವರ್ಷದ ಪ್ರೀತಿಗೆ ಈಗ ಅರ್ಥ ಸಿಕ್ಕಿತು. ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಮಯೂರಿ ಪತಿ ಅರುಣ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ.
ಹೊಸಬಾಳಿನ ಹೊಸಿಲಲ್ಲಿರುವ ನವಜೋಡಿಗೆ ನಟ ನಟಿಯರಾದ ಕಾರ್ತಿಕ್ ಜಯರಾಮ್(ಜೆಕೆ), ಸ್ಪೂರ್ತಿ ವಿಶ್ವಾಸ್ ಸೇರಿದಂತೆ ಸ್ಯಾಂಡಲ್ವುಡ್ನ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.
ಹುಬ್ಬಳ್ಳಿಯವರಾದನಟಿ ಮಯೂರಿ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದರು. ಆ ಧಾರಾವಾಹಿ ಅವರಿಗೆ ಬಹಳ ಹೆಸರು ತಂದುಕೊಟ್ಟಿತ್ತು. ನಂತರ 2015ರಲ್ಲಿ ‘ಕೃಷ್ಣಲೀಲಾ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದರು. ಆ ಸಿನಿಮಾ 100 ದಿನ ಯಶಸ್ವಿಯಾಗಿ ಪ್ರದರ್ಶನವಾಗಿತ್ತು. ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’, ‘ನಟರಾಜ ಸರ್ವೀಸ್’, ‘ಕರಿಯ 2’, ‘ರುಸ್ತುಂ’, ‘ನನ್ನ ಪ್ರಕಾರ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.