ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಇಂದು (ಆ.22) 66ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ತಮ್ಮ ನಿವಾಸದಲ್ಲಿ ಪುತ್ರ ರಾಮ್ಚರಣ್, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.
ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ನಟ ನಟಿಯರು ಹಾಗೂ ಬಾಲಿವುಡ್ ತಾರೆಯರು ಚಿರುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಚಿರು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಚಿರು ಈ ವರ್ಷ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮೂರು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ವಾಲ್ಟರ್ ವೀರಯ್ಯ, ಭೋಳ ಶಂಕರ್ ಹಾಗೂ ಗಾಡ್ಫಾದರ್ ಸಿನಿಮಾಗಳಲ್ಲಿ ಚಿರು ನಟಿಸುತ್ತಿದ್ದಾರೆ.
ಗಾಡ್ಫಾದರ್ ಸಿನಿಮಾವನ್ನು ಮೋಹನ ರಾಜಾ, ವಾಲ್ಟರ್ ವೀರಯ್ಯ ಚಿತ್ರಕ್ಕೆ ಕೆ,ಎಸ್ ರವೀಂದ್ರ ಹಾಗೂ ಭೋಳ ಶಂಕರ್ ಸಿನಿಮಾಗೆ ಮೇಹರ್ ರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇಂದು ಗಾಡ್ಫಾದರ್ ಸಿನಿಮಾದ ಪೋಸ್ಟರ್ ಹಾಗೂ ಭೋಳ ಶಂಕರ್ ಸಿನಿಮಾದ ಟೈಟಲ್ ವಿಡಿಯೊ ಬಿಡುಗಡೆ ಮಾಡಲಾಗಿದೆ. ಮಲಯಾಳಂನಲ್ಲಿ ಯಶಸ್ವಿಯಾಗಿದ್ದಮೋಹನ್ ಲಾಲ್ನಟನೆಯ ‘ಲೂಸಿಫರ್’ ಸಿನಿಮಾವನ್ನು ಗಾಡ್ಫಾದರ್ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದೆ.
ಸದ್ಯ ಚಿರಂಜೀವಿ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.