ADVERTISEMENT

#MeToo: ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ಸರ್ಜಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 18:58 IST
Last Updated 20 ಅಕ್ಟೋಬರ್ 2018, 18:58 IST
ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌
ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌   

ಬೆಂಗಳೂರು: ‘ವಿಸ್ಮಯ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನನ್ನೊಂದಿಗೆ ಅರ್ಜುನ್‌ ಅವರು ಅಸಭ್ಯವಾಗಿ ವರ್ತಿಸಿದ್ದರು ಎಂಬುದು ಶ್ರುತಿ ಹರಿಹರನ್ ಆರೋಪಿಸಿದ್ದರೆ, ‘ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ನಟ ಅರ್ಜುನ್‌ ಸರ್ಜಾ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಆರೋಪದ ಬಗ್ಗೆ ಶ್ರುತಿ ಅವರು ಫೇಸ್‌ಬುಕ್‌ ಪುಟದಲ್ಲಿ ಅವರು ಒಂದು ಬರಹವನ್ನು ಹಂಚಿಕೊಂಡಿದ್ದಾರೆ.

‘ನಾನು ಅರ್ಜುನ್‌ ಸರ್ಜಾ ಅವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದೆ. ಅವತ್ತು ನಾವು ಪ್ರಣಯದ ಸನ್ನಿವೇಶವೊಂದರಲ್ಲಿ ನಟಿಸಬೇಕಾಗಿತ್ತು. ಆ ದೃಶ್ಯದಲ್ಲಿ ನಮ್ಮ ನಡುವೆ ಕೆಲವು ಸಂಭಾಷಣೆಗಳು ನಡೆಯುತ್ತವೆ. ನಂತರ ನಾವು ತಬ್ಬಿಕೊಳ್ಳಬೇಕಿತ್ತು. ಈ ದೃಶ್ಯದ ತಾಲೀಮಿನ ಸಂದರ್ಭದಲ್ಲಿ ನಮ್ಮ ನಡುವಿನ ಸಂಭಾಷಣೆಯ ನಂತರ ಅರ್ಜುನ್‌ ನನ್ನನ್ನು ತಬ್ಬಿಕೊಂಡರು. ಯಾವ ಮುನ್ನೆಚ್ಚರಿಕೆ ನೀಡದೆ, ಅನುಮತಿಯನ್ನೂ ಪಡೆದುಕೊಳ್ಳದೆ ಅವರು ತಮ್ಮ ಕೈಗಳನ್ನು ನನ್ನ ಬೆನ್ನಿನ ಮೇಲಿಂದ ಕೆಳಗೆ ಸವರತೊಡಗಿದರು. ಮತ್ತೆ ನನ್ನ ದೇಹವನ್ನು ಇನ್ನಷ್ಟು ಹತ್ತಿರಕ್ಕೆ ಎಳೆದು ಬಿಗಿಯಾಗಿ ಹಿಡಿದುಕೊಂಡು ನಿರ್ದೇಶಕರ ಬಳಿ ನಾವು ಮುಂದಿನ ದೃಶ್ಯಗಳಲ್ಲಿ ಈ ಐಡಿಯಾ ಬಳಸಿಕೊಳ್ಳಬಹುದಲ್ಲವೇ?ಎಂದು ಕೇಳಿದರು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಕಾನೂನು ಸಮರ: ‘ನನ್ನ ಮೇಲಿನ ಆರೋಪ ಕೇಳಿ ಆಘಾತವಾಗಿದೆ. ಇಂತಹಆರೋಪಗಳು ಸರ್ವೇ ಸಾಮಾನ್ಯ. ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಅರ್ಜುನ್‌ ಸರ್ಜಾ ಪ್ರತಿಕ್ರಿಯಿಸಿದ್ದಾರೆ.

ಸಂಜನಾ ಆರೋಪ:‘ಗಂಡ ಹೆಂಡತಿ’ ಚಿತ್ರೀಕರಣದ ವೇಳೆ ನಿರ್ದೇಶಕ ರವಿ ಶ್ರೀವತ್ಸಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿಸಂಜನಾ ಆರೋಪಿಸಿದ್ದಾರೆ.

**

‘‌ಆರೋಪ ಮಾಡುವುದಕ್ಕೂ ಮೊದಲ ಶ್ರುತಿ ಯೋಚಿಸಬೇಕಿತ್ತು. ಇಬ್ಬರು ಕುಳಿತು ಈ ಬಗ್ಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬಹುದಿತ್ತು.

–ಎಸ್‌.ಎ. ಚಿನ್ನೇಗೌಡ, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

**

‘ಎಲ್ಲರೂ ಹೀಗೆ ಹೇಳುತ್ತಾ ಹೋದರೆ ಕೊನೆ ಎಂಬುದೇ ಇರುವುದಿಲ್ಲ. ನಾನು ಯಾರ ಪರವೂ ಇಲ್ಲ. ಈಗ ಶ್ರುತಿ ಹರಿಹರನ್‌ ಅವರು ಆರೋಪ ಮಾಡಿರುವುದರಲ್ಲಿ ಅರ್ಥವಿಲ್ಲ. ಅರ್ಜುನ್‌ ಸರ್ಜಾ ಅವರಿಗೆ ಶ್ರುತಿ ವಯಸ್ಸಿನ ಪುತ್ರಿ ಇದ್ದಾರೆ. ಆರೋಪ ಮಾಡುವುದಕ್ಕೂ ಮೊದಲು ಅವರು ಯೋಚಿಸಬೇಕಿತ್ತು.’

–ಡಾ.ವಿ. ನಾಗೇಂದ್ರಪ್ರಸಾದ್‌,ಅಧ್ಯಕ್ಷರು,ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ

**

ಅರ್ಜುನ್‌ ಸಂಭಾವಿತ ವ್ಯಕ್ತಿ. ಇವರೆಲ್ಲ ನಿನ್ನೆ- ಮೊನ್ನೆ ಬಂದಿರುವ ನಟಿಯರು. ಶ್ರುತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ.

–ರಾಜೇಶ್‌, ಹಿರಿಯ ನಟ ಮತ್ತು ಅರ್ಜುನ್‌ ಸರ್ಜಾ ಅವರ ಮಾವ

**

‘ಫೈರ್’ ಬೆಂಬಲ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಹರಿಹರನ್ ಅವರಿಗೆ ‘ಫೈರ್’ಸಂಘಟನೆ (ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಆ್ಯಂಡ್ ರೈಟ್ಸ್‌) ಬೆಂಬಲ ಸೂಚಿಸಿದೆ.

ಫೈರ್‌ನ ಇನ್ನೋರ್ವ ಸದಸ್ಯೆ ಕವಿತಾ ಲಂಕೇಶ್, ‘ಇಬ್ಬರ ಜತೆಗೂ ಮಾತನಾಡಿ, ಕಾನೂನಿನ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು’ ಎಂದರು.

**

‘ಪ್ರಜಾವಾಣಿ’ ಬಳಗದ ‘ಸುಧಾ’ ವಾರಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಶ್ರುತಿ ಹರಿಹರನ್‌ ಅವರು ‘ವಿಸ್ಮಯ’ ಚಿತ್ರದ ಶೂಟಿಂಗ್‌ ವೇಳೆ ನಡೆದ ಕಹಿಘಟನೆಯನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್‌ 25ರ ಸಂಚಿಕೆ ಮಾರುಕಟ್ಟೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.