ಕಳೆದ ಡಿಸೆಂಬರ್ ತಿಂಗಳಲ್ಲಿ ತಮಿಳು ನಟ ಧನುಷ್ ತಮ್ಮ 44ನೇ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಇದನ್ನು ಮಿತ್ರನ್ ಜವಾಹರ್ ನಿರ್ದೇಶಿಸಲಿದ್ದಾರೆ ಎಂಬ ಸಂಗತಿಯನ್ನು ಚಿತ್ರತಂಡ ಈಗ ಬಹಿರಂಗಪಡಿಸಿದೆ.
ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ. ಧನುಷ್– ಮಿತ್ರನ್ ಜೋಡಿಯ ನಾಲ್ಕನೇ ಚಿತ್ರವಿದು. ಈ ಹಿಂದೆ ಇವರಿಬ್ಬರು ‘ಯಾರಡಿ ನೀ ಮೋಹಿನಿ’, ‘ಕುಟ್ಟಿ’, ‘ಉತ್ತಮ ಪುತ್ರನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಎಲ್ಲಾ ಧನುಷ್ ಅವರದೇ ಎನ್ನಲಾಗಿದೆ.
ಧನುಷ್ ಅಭಿನಯಿಸುತ್ತಿರುವ ‘ಜಗಮೇ ತಂದಿರಂ’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್ಡೌನ್ ಸಂಪೂರ್ಣ ತೆರವಾದ ಕೂಡಲೇ ಬಿಡುಗಡೆಯಾಗಲಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸಿದವರು ಕಾರ್ತಿಕ್ ಸುಬ್ಬರಾಜ್.
ಹಾಗೆಯೇ ಮಾರಿ ಸೆಲ್ವರಾಜ್ ನಿರ್ದೇಶನದ ‘ಕರ್ಣನ್’ ಚಿತ್ರದಲ್ಲೂ ಧನುಷ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲ ಭಾಗಗಳ ಚಿತ್ರೀಕರಣ ಬಾಕಿಯಾಗಿದ್ದು, ಲಾಕ್ಡೌನ್ನಿಂದ ಸ್ಥಗಿತಗೊಂಡಿದೆ.
ಧನುಷ್ ಅವರ 43ನೇ ಸಿನಿಮಾವನ್ನು ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡಲಿದ್ದು, ಕಾರ್ತಿಕ್ ನರೇನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಧನುಷ್ ತಯಾರಿ ನಡೆಸಿದ್ದು, ಲಾಕ್ಡೌನ್ ನಂತರ ಸೆಟ್ಟೇರುವ ನಿರೀಕ್ಷೆಯಿದೆ. ಈ ಎರಡೂ ಚಿತ್ರಗಳ ಕೆಲಸ ಪೂರ್ಣಗೊಂಡ ಬಳಿಕ ಮಿತ್ರನ್ ಜವಾಹರ್ ನಿರ್ದೇಶನದ ಹೊಸ ಸಿನಿಮಾದ ಕೆಲಸಗಳು ಆರಂಭವಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.