ಮಹಾತ್ಮ ಗಾಂಧೀಜಿಯವರ ಬಾಲ್ಯ ಕುರಿತ ಸಿನಿಮಾ ‘ಮೋಹನದಾಸ’ ಪೂರ್ಣಗೊಂಡಿದೆ. ಗಾಂಧಿ ಜಯಂತಿಯಂದು (ಅ.2) ಚಿತ್ರವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
‘ಮಿತ್ರ ಚಿತ್ರ’ ಲಾಂಛನದಡಿಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮೂರೂ ಭಾಷೆಗಳಲ್ಲಿನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಪಿ.ಶೇಷಾದ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಚಲನಚಿತ್ರ ಪ್ರಮಾಣೀಕೃತ ಮಂಡಳಿಗೆಚಿತ್ರ ಸಲ್ಲಿಸಲಾಗಿದೆ. ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದ್ದೇವೆ. ಚಿತ್ರದ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದೇವೆ. ಈ ಪೋಸ್ಟರ್ಗೆ ಪ್ರೇಕ್ಷಕರು ಮತ್ತು ನೆಟ್ಟಿಗರಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಸಿನಿಮಾ ತೆರೆಗೆ ಬರುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಪಿ.ಶೇಷಾದ್ರಿ.
‘ಬಹಳ ಕುತೂಹಲಕರವಾಗಿರುವ ಗಾಂಧೀಜಿಯ ಬಾಲ್ಯದ ಜೀವನವನ್ನು ಸಿನಿಮಾ ಮೂಲಕ ದೇಶದಾದ್ಯಂತ ಮಕ್ಕಳಿಗೆ ಉಚಿತವಾಗಿ ತೋರಿಸಬೇಕೆನ್ನುವುದು ನಮ್ಮ ಉದ್ದೇಶ. ಇದಕ್ಕೆ ನೆರವಾಗುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಅಲ್ಲದೇ, ಗಾಂಧಿ ಜಯಂತಿಯಂದು ‘ಮೋಹನದಾಸ’ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ತೋರಿಸಲು ಪ್ರಯತ್ನಗಳು ನಡೆಯುತ್ತಿವೆ’ ಎನ್ನುತ್ತಾರೆ ಅವರು.
30 ದಿನ ಚಿತ್ರೀಕರಣ
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಬಾಲ ನಟರಾದ ಮೈಸೂರಿನ ಪರಮ್ಸ್ವಾಮಿ (7 ವರ್ಷದ ಗಾಂಧಿ), ಬೆಂಗಳೂರಿನ ಶ್ರೀನಗರದ ಸಮರ್ಥ್ (14 ವರ್ಷದ ಬಾಲಕ) ಹಾಗೂ ಹಿರಿಯ ನಟಿ ಶ್ರುತಿ ಕೃಷ್ಣ(ಪುತಲಿಬಾಯಿ), ಅನಂತ್ ಮಹಾದೇವನ್ (ಕರಮ್ಚಂದ್ ಗಾಂಧಿ), ದತ್ತಣ್ಣ (ಬಯೋಸ್ಕೋಪ್ ವಾಲಾ) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಗಾಂಧಿ ಹುಟ್ಟಿದಗುಜರಾತ್ನ ಪೋರಬಂದರಿನಲ್ಲಿರುವ ಮನೆ ‘ಕೀರ್ತಿ ಮಂದಿರ’ ಮತ್ತು ಬಾಲ್ಯದ ಕೆಲ ವರ್ಷಗಳನ್ನು ಕಳೆದ ಮನೆ ರಾಜ್ಕೋಟ್ನ ‘ಕಾಬಾ ಗಾಂಧಿ ನೆ ಡೇಲಾ’ ಹಾಗೂ ಶಿಕ್ಷಣ ಕಲಿತ ಕಾಥ್ಯವಾರ ಶಾಲೆಯಲ್ಲೂ (ಆಲ್ಫ್ರೆಡ್ ಹೈಸ್ಕೂಲ್)ಚಿತ್ರೀಕರಣ ನಡೆಸಲಾಯಿತು. ಅಲ್ಲದೆ, ಬೆಂಗಳೂರಿನ ಚಾಮರಾಜಪೇಟೆಯ ಬಿ.ಕೆ.ಮರಿಯಪ್ಪ ಹಾಸ್ಟೆಲ್ನಲ್ಲಿ ಒಳಾಂಗಣ ಸೆಟ್ ಹಾಕಿ ಚಿತ್ರೀಕರಣ ಮಾಡಲಾಯಿತು. ಸ್ವಾತಂತ್ರ್ಯ ಪೂರ್ವದ ಚಿತ್ರಣ ಕಟ್ಟಿಕೊಡಲು ಸಾಕಷ್ಟು ಗ್ರಾಫಿಕ್ ಕೆಲಸ ಮಾಡಲಾಗಿದೆ ಎನ್ನುತ್ತಾರೆ ಶೇಷಾದ್ರಿ.
ಭಾಸ್ಕರ್ ಛಾಯಾಗ್ರಹಣ, ಕೆಂಪರಾಜುಸಂಕಲನ, ಪ್ರವೀಣ್ ಗೋಡ್ಖಿಂಡಿ ಸಂಗೀತ ಈ ಚಿತ್ರಕ್ಕೆ ಇದೆ. ‘ಮಿತ್ರ ಚಿತ್ರದ’ 15 ಮಂದಿ ನಿರ್ಮಾಪಕರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.