ADVERTISEMENT

ಪೂಜಾರಿಯ ದೈವ ಶಕ್ತಿ - ದುಷ್ಟ ಶಕ್ತಿ ಜಟಾಪಟಿ

ಕೆ.ಎಂ.ಸಂತೋಷ್‌ ಕುಮಾರ್‌
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
‘ಮೃತ್ಯುಂಜಯಂ’ ಚಿತ್ರದಲ್ಲಿ ದಿಕ್ಷಿತಾ ನಾಣ್ಯಿಪ್ಪ, ರುದ್ರಪ್ರಯಾಗ ಮತ್ತು ಸ್ಫಟಿಕಾ ತುಂಬರಗುದ್ದಿ ಮಠ್
‘ಮೃತ್ಯುಂಜಯಂ’ ಚಿತ್ರದಲ್ಲಿ ದಿಕ್ಷಿತಾ ನಾಣ್ಯಿಪ್ಪ, ರುದ್ರಪ್ರಯಾಗ ಮತ್ತು ಸ್ಫಟಿಕಾ ತುಂಬರಗುದ್ದಿ ಮಠ್   
""

ದೈವಶಕ್ತಿ ವರ್ಸಸ್‌ ದುಷ್ಟಶಕ್ತಿಯ ಸಂಘರ್ಷದಲ್ಲಿ ಕೊನೆಗೆ ಜಯವಾಗುವುದು ದೈವಶಕ್ತಿಗೇ. ಇಂಥದ್ದೊಂದು ಸಂದೇಶವನ್ನು ಪ್ರಧಾನವಾಗಿ ಬಿಂಬಿಸುವ ಮತ್ತು ಧಾರ್ಮಿಕ ಕಥೆಯ ಲೇಪನದ ಜತೆಗೆ ಪಕ್ಕಾ ಕಮರ್ಷಿಯಲ್‌ ಚಿತ್ರವಾದ ‘ಮೃತ್ಯುಂಜಯಂ’ಗೆ ನಿಲೋಗಲ್ ರವಿ ಪೂಜಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ದಿll ಮಂಜುನಾಥನ ಗೆಳೆಯರು’ ಚಿತ್ರದಲ್ಲಿ ನಟಿಸಿದ್ದ ನಾಯಕ ನಟ ರುದ್ರಪ್ರಯಾಗ ಅವರಿಗೆ ಇದು ಎರಡನೇ ಚಿತ್ರ. ಇದರಲ್ಲಿ ಇಬ್ಬರು ನಾಯಕಿಯರು ಇದ್ದು,ದಿಕ್ಷಿತಾ ನಾಣ್ಯಿಪ್ಪ ಮತ್ತು ಸ್ಫಟಿಕಾ ತುಂಬರಗುದ್ದಿ ಮಠ್ ರುದ್ರಪ್ರಯಾಗ ಜತೆಗೆ ಡ್ಯುಯೆಟ್‌ ಹಾಡಲಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಹುಲಿಜಂತಿ ಕ್ಷೇತ್ರದ ಪಟ್ಟದ ದೇವರು ಮಾಳಿಂಗರಾಯ ಮಾಃಅರಾಯರು ಕಾಣಿಸಿಕೊಂಡಿದ್ದಾರೆ.

‘12 ರಾಶಿಗಳನ್ನು ಪ್ರತಿನಿಧಿಸುವಂತೆ ಈ ಚಿತ್ರದಲ್ಲಿ ಹನ್ನೆರಡು ಪಾತ್ರಗಳು ಇರಲಿವೆ. ಈ ಎಲ್ಲ ಪಾತ್ರಗಳು ಒಟ್ಟಿಗೆ ಸೇರುವಾಗ ಒಂದು ಘಟನೆ ನಡೆಯುತ್ತದೆ. ಆ ಘಟನೆಯೇ ಈ ಚಿತ್ರದ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌. ಈ ಘಟನೆಯ ಸುತ್ತವೇ ಚಿತ್ರದ ಕಥೆ ಸುತ್ತುತ್ತದೆ’ ಎನ್ನುತ್ತಾರೆ ನಿರ್ದೇಶದನ ಜತೆಗೆಕಥೆ, ಚಿತ್ರಕಥೆ ಮತ್ತುಸಾಹಿತ್ಯ ಬರೆದಿರುವ ರವಿ ಪೂಜಾರಿ.

ADVERTISEMENT
ನಿಲೋಗಲ್ ರವಿ ಪೂಜಾರಿ

ಮೂಲತಃ ಚಿತ್ರಕಲಾವಿದರಾದ ರವಿ ಪೂಜಾರಿಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ.ಅರಣ್ ಸಾಗರ್ ಮತ್ತು ಜಿ.ಮೂರ್ತಿ ಅವರ ಬಳಿ ಕಲಾ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವಿ.ಎಸ್.ನಾರಾಯಣ್ (ಸಿಂಹಾದ್ರಿ ಸಿಂಹ, ಚಂದ್ರ ಚಕೋರಿ), ಓಂ ಪ್ರಕಾಶ್ ರಾವ್ (ಸಾಹುಕಾರ), ಹ.ಸೂ. ರಾಜಶೇಖರ (ಚಾಣಾಕ್ಷ), ಲಕ್ಕಿ ಶಂಕರ್ (ಜಮಾನ) ಅವರೊಂದಿಗೆ ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಪಳಗಿದ್ದಾರೆ. ‘ದಿll ಮಂಜುನಾಥನ ಗೆಳೆಯರು’, ‘ಸೈಕೋ ಶಂಕ್ರ’, ‘ವೈರಾ’ ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

ಕಣ್ಣಂಚಲಿ (2011) ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ರವಿ ಪೂಜಾರಿ ಒಂಬತ್ತು ವರ್ಷಗಳ ನಂತರ ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ ತೆರೆದು ಸ್ನೇಹಿತರೊಡಗೂಡಿ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ.

‘ಕಥೆಗೆ ಪೂರಕ ಸನ್ನಿವೇಶಗಳಿರುವರಾಯಚೂರು ಜಿಲ್ಲೆಯ ಜಲದುರ್ಗಾ ಕೋಟೆ, ಗೋಲಪಲ್ಲಿ, ನಿಲೋಗಲ್ ಸುತ್ತಮುತ್ತ ಹಾಗೂ ಬೆಂಗಳೂರು, ಶಿವಗಂಗೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣೋತ್ತರ ಕೆಲಸಗಳು ಭರದಿಂದ ನಡೆಯುತ್ತಿವೆ’ ಎನ್ನುತ್ತಾರೆ ಅವರು.

ಶ್ರೀ ಪೂಜಾರಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿಈ ಚಿತ್ರ ನಿರ್ಮಿಸಲಾಗುತ್ತಿದೆ. ತಾರಾಗಣದಲ್ಲಿಭರತ ಕುಮಾರ, ನಾಗೇಂದ್ರ ಅರಸ್, ಹೊನ್ನವಳ್ಳಿ ಕೃಷ್ಣ, ಶರಣ ಬಸವ ಹರ್ವಾಪುರ, ರಾಘು ವದ್ದಿ ಹುಬ್ಬಳ್ಳಿ, ಅರುಣ್ ಭಾಗವತ್, ಅಲ್ತಾಫ್ ರಾಯಚೂರು, ನಿರ್ಮಲಾ, ಸೌಮ್ಯ, ಕುಮಾರಿ ಸುವರ್ಣ ಇದ್ದಾರೆ.

ಛಾಯಾಗ್ರಹಣ ವಿಜಯ್ ಕಾಸ್ಟನ್, ನಾಗರಾಜ್ ಮೂರ್ತಿ ಅವರದು. ‌‌‌ಸಂಕಲನ ಮಹೇಶ್ ಗಂಗಾವತಿ, ಸಂಗೀತ ಕೆವಿನ್ ಎಂ., ಸಾಹಿತ್ಯ ಭರತ ಕುಮಾರ, ಸಂಭಾಷಣೆ ನಿರ್ಣಯ ಸಿಂಧನೂರು, ಸಾಹಸ ಅವತಾರ್ ಆದಿತ್ಯ, ರಮೇಶ್, ನೃತ್ಯ ಸಂಯೋಜನೆ ಸದಾ ರಾಘವ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.