ಅಭಿಷೇಕ್ ಶೆಟ್ಟಿ ನಿರ್ದೇಶನದ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.
ಅಭಿಷೇಕ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ ಇದು. ಹೀರೊಯಿಸಂ ಸಿನಿಮಾ ಅಲ್ಲ. ಪ್ರತಿಯೊಂದು ಪಾತ್ರಕ್ಕೂ ಮಹತ್ವ ನೀಡಲಾಗಿದೆಯಂತೆ. ಕಾಮಿಡಿ, ಸಸ್ಪೆನ್ಸ್ ಹಾಗೂ ಹಾರರ್ ಕೂಡ ಇದೆ. ಮೆಟ್ರೊ ಸಿಟಿಯ ಬದುಕನ್ನು ಕಟ್ಟಿಕೊಡುವ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಆತನ ಹೆಸರು ಗಣೇಶ್ ಅಲಿಯಾಸ್ ಗಣಿ. ಬಿ.ಕಾಂ. ಪಾಸಾಗಿರುತ್ತಾನೆ. ಉದ್ಯೋಗ ಇರುವುದಿಲ್ಲ. ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಾನೆ. ಮನೆಯವರಿಗೂ ಆತನ ಮೇಲೆ ತಿರಸ್ಕಾರ. ₹ 10 ಲಕ್ಷ ದುಡಿಯಲು ಮನೆ ಅಳಿಯನಾಗಿ ಹೋದಾಗ ಏನೆಲ್ಲಾ ಅವಾಂತರಕ್ಕೆ ಸಿಲುಕುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ’ ಎಂದು ವಿವರಿಸಿದರು ಅಭಿಷೇಕ್ ಶೆಟ್ಟಿ.
ಇಡೀ ಚಿತ್ರದ ಶೂಟಿಂಗ್ ನಡೆದಿರುವುದು ಬೆಂಗಳೂರಿನಲ್ಲಿಯೇ. ಐಶಾನಿ ಶೆಟ್ಟಿ ಇದರ ನಾಯಕಿ. ನಾಗೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ. ನಾಗರಾಜ್ ಅವರ ಛಾಯಾಗ್ರಹಣವಿದೆ. ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಪಲ್ಲವಿಗೌಡ, ರಚನಾ, ಸುಚೇಂದ್ರ ಪ್ರಸಾದ್, ಜಹಾಂಗೀರ್, ಮಂಜುನಾಥ ಹೆಗ್ಡೆ, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.