ಎಂಟು ವರ್ಷಗಳ ದೊಡ್ಡ ಬ್ರೇಕ್ ನಂತರ ನವ್ಯಾ ನಾಯರ್ ಮಲಯಾಳ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. ವಿ. ಕೆ. ಪ್ರಕಾಶ್ ನಿರ್ದೇಶನದ ಹೊಸ ಸಿನಿಮಾ ಮೂಲಕ ಮಾಲಿವುಡ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಈ ಸಿನಿಮಾಕ್ಕೆ ‘ಓರುದೀ’ ಎಂದು ಹೆಸರನ್ನಿಟ್ಟಿದ್ದು, ಇದರಲ್ಲಿ ನವ್ಯಾ ವಿಶೇಷ, ಪವರ್ಫುಲ್ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಮಮ್ಮುಟ್ಟಿ ಹಾಗೂ ಮಂಜು ವಾರಿಯರ್ ಫೋಟೊಗಳ ಕೆಳಗೆ ‘ಫೈರ್ ಆನ್ ಯು’ ಎಂಬ ಟ್ಯಾಗ್ಲೈನ್ ಇದೆ. ಈ ಅಡಿಬರಹವು ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚು ಮಾಡಿತ್ತು. ಈಗ ಈ ಚಿತ್ರದಲ್ಲಿ ನವ್ಯಾ ನಟಿಸಲಿದ್ದಾರೆ ಎಂಬ ಸುದ್ದಿಯೂ ಸಹ ಚಿತ್ರವನ್ನು ಕಾಯುವಂತೆ ಮಾಡಿದೆ. ‘ನಾನು ಈ ಎಂಟು ವರ್ಷಗಳಲ್ಲಿ ಅನೇಕ ಚಿತ್ರಕತೆಗಳನ್ನು ಕೇಳಿದೆ. ಆದರೆ ‘ಒರುದೀ’ ಸಿನಿಮಾ ಕತೆ ಥ್ರಿಲ್ಲಿಂಗ್ ಆಗಿದೆ. ಇಂತಹ ಕತೆಯನ್ನೇ ನಾನು ಕಾಯುತ್ತಿದ್ದೆ’ ಎಂದು ನವ್ಯಾ ಹೇಳಿದ್ದಾರೆ.
ಈ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಎಸ್. ಸುರೇಶ್ ಬಾಬು ಅವರದು. ಜಿಂಷಿ ಖಾಲೀದ್ ಛಾಯಾಗ್ರಹಣ, ಲಿಜೊ ಪೌಲ್ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರವನ್ನು ಬೆನ್ಝಿ ಪ್ರೊಡಕ್ಷನ್ಸ್ ಅಡಿಯಲ್ಲಿ ಬೆನ್ಝಿ ನಾಸರ್ ನಿರ್ಮಾಣ ಮಾಡುತ್ತಿದ್ದಾರೆ.
2001ರಲ್ಲಿ ‘ಇಷ್ಟಂ’ ಚಿತ್ರದ ಮೂಲಕ ಮಾಲಿವುಡ್ಗೆ ಕಾಲಿಟ್ಟವರು ನವ್ಯಾ. ಅವರ ಚಿತ್ರಜೀವನದಲ್ಲಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ‘ನಂದನಂ’. ಈ ಚಿತ್ರ 2002ರಲ್ಲಿ ಬಿಡುಗಡೆಯಾಗಿತ್ತು. ಇದರ ನಾಯಕ ಫೃಥ್ವಿರಾಜ್. ‘ನಮ್ಮುಡೆ ವೀಡು’ ಚಿತ್ರದ ನಂತರ ಅವರು ಸಿನಿಮಾದಿಂದ ದೂರವಾಗಿದ್ದರು.
ಸದ್ಯ ‘ಓರುದೀ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ವಿ.ಕೆ ಪ್ರಕಾಶ್ ‘ಮೆಟ್ರೋ ಮ್ಯಾನ್’ ಎಂದೇ ಖ್ಯಾತರಾದ ಇ.ಶ್ರೀಧರನ್ ಅವರ ಬಯೋಪಿಕ್ ನಿರ್ದೇಶಿಸಲಿದ್ದಾರೆ. ಇದರಲ್ಲಿ ಇ.ಶ್ರಿಧರನ್ ಪಾತ್ರದಲ್ಲಿ ಜಯಸೂರ್ಯ ನಟಿಸಲಿದ್ದಾರೆ. ಈ ಚಿತ್ರದ ಹೆಸರು ‘ರಾಮಸೇತು’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.