ADVERTISEMENT

ಸದ್ದಿಲ್ಲದೆ ಬರಲಿವೆ ಹೊಸ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:00 IST
Last Updated 25 ಮಾರ್ಚ್ 2019, 20:00 IST
‘ವೀಕ್‌ ಎಂಡ್‌’ ಚಿತ್ರದಲ್ಲಿ ಮಿಲಿಂದ್ ಮತ್ತಯ, ಸಂಜನಾ ಬುರ್ಲಿ
‘ವೀಕ್‌ ಎಂಡ್‌’ ಚಿತ್ರದಲ್ಲಿ ಮಿಲಿಂದ್ ಮತ್ತಯ, ಸಂಜನಾ ಬುರ್ಲಿ   

ಸಾಮಾನ್ಯವಾಗಿ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಸುದ್ದಿಯಾಗುತ್ತದೆ. ಅದು ಕೊನೆಗೊಳ್ಳುವುದು ಸಿನಿಮಾ ತೆರೆ ಕಂಡ ನಂತರದ ವಿಮರ್ಶೆಯೊಂದಿಗೆ. ಕೆಲವೊಮ್ಮೆ, ಬಿಡುಗಡೆಯಾದ ಮೇಲೆ ಕೂಡಾ ಸುದ್ದಿಯಾಗುವುದಿದೆ. ಆದರೆ ಕೋಸ್ಟಲ್‌ವುಡ್‌ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಕೆಲವು ಚಿತ್ರಗಳು ಸದ್ದಿಲ್ಲದೆ ಸೆಟ್ಟೇರಿ ಬಿಡುಗಡೆಗೆ ಸಜ್ಜಾಗಿವೆ! ಬನ್ನಿ ಅಂತಹ ಕೆಲವು ಚಿತ್ರಗಳ ಬಗ್ಗೆ ಕಣ್ಣಾಡಿಸೋಣ...

ದಾಮಾಯಣ!
ಹೊಸತನದ ಚಿತ್ರಗಳಿಗೆ ಹೆಸರಾಗಿರುವ ಮಂಗಳೂರಿನಿಂದ ಇದೀಗ ಮತ್ತೊಂದು ಕನ್ನಡ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಹೆಸರು ‘ದಾಮಾಯಣ’.

25ರ ಹರೆಯದ ಯುವ ನಿರ್ದೇಶಕ, ಬುಟ್ಟಿಸ್ಟೋರ್.ಕಾಮ್‌ನ ಸ್ಥಾಪಕರಾದ ಶ್ರೀಮುಖ –ತನ್ನ ಕನಸಿನಲ್ಲಿ ಕಂಡದ್ದನ್ನು ಕಥೆಯಾಗಿಸಿ ತಮ್ಮ ಮಿತ್ರರಾದ ಸಂಗೀತ ನಿರ್ದೇಶಕ ಕೀರ್ತನ್ ಬಾಳಿಲ ಹಾಗೂ ಕಾರ್ಯಕಾರಿ ನಿರ್ಮಾಪಕ ಅಕ್ಷಯ್ ರೇವಣ್ಕರ್‍ರಿಗೆ ಹೇಳಿದ್ದರಂತೆ. ಕಥೆ ಮೆಚ್ಚಿದ ಇಬ್ಬರೂ ಚಿತ್ರವನ್ನು ಬೆಳ್ಳಿ ತೆರೆಗೆ ತರಲು ಉತ್ತೇಜನ ನೀಡಿದರಂತೆ.

ADVERTISEMENT

ಮೂರ್ಖನೊಬ್ಬನ ಬಯಕೆ ಹಾಗೂ ವಾಸ್ತವದ ನಡುವೆ ಚಿತ್ರ ಸಾಗುತ್ತದೆ. 112 ನಿಮಿಷಗಳ ಈ ಚಿತ್ರದಲ್ಲಿ 5 ಹಾಡುಗಳಿವೆ.ದಕ್ಷಿಣ ಕನ್ನಡದ ಭಾಷಾ ಸೊಗಡು ಇದೆಯಂತೆ. ಚಿತ್ರವನ್ನುಶ್ರೀಮುಖ ಅವರೇ ನಿರ್ದೇಶಿಸಿದ್ದಾರೆ.

‘ದಾಮಾಯಣ’ದ ಚಿತ್ರೀಕರಣವು ಮಂಗಳೂರಿನ ಸುತ್ತಮುತ್ತಲಿನ ಪರಿಸರದಲ್ಲಿ ನಡೆದಿದ್ದು, ಕೊನೆಯ ಹಂತದ ನಿರ್ಮಾಣಕಾರ್ಯ ನಡೆಯುತ್ತಿದೆ. ‘ಸೆವೆಂಟಿ ಸೆವೆನ್ ಸ್ಟುಡಿಯೋಸ್’ನ ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರು. ಸಿದ್ದು ಜಿ.ಎಸ್. ಮತ್ತು ಕಾರ್ತಿಕ್ ಕೆ.ಎಂ. ಅವರ ಛಾಯಾಗ್ರಹಣ ಮತ್ತು ಸಂಕಲನ ಚಿತ್ರಕ್ಕಿದೆ. ಆಗಸ್ಟ್ ತಿಂಗಳಿನಲ್ಲಿ ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಏಪ್ರಿಲ್‌ನಲ್ಲಿ ‘ವೀಕ್‌ ಎಂಡ್‌’
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ. ನಿರ್ಮಿಸಿರುವ ‘ವೀಕ್ ಎಂಡ್’ ಚಿತ್ರ ಏಪ್ರಿಲ್‍ನಲ್ಲಿ ತೆರೆಗೆ ಬರಲಿದೆ.

ಶೃಂಗೇರಿ ಸುರೇಶ್ ನಿರ್ದೇಶನ ಮತ್ತು ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ ಮಾಡಿದ್ದಾರೆ.

ಮಿಲಿಂದ್ ಮತ್ತಯ ನಾಯಕನಾಗಿ ಮತ್ತು ನಾಯಕಿಯಾಗಿ ಸಂಜನಾ ಬುರ್ಲಿ ಅಭಿನಯಿಸಿದ್ದಾರೆ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ತಾರಾಬಳಗವಿದೆ.‌

ಈ ವಾರ ‘ಧರ್ಮಪುರ’
ರಾಜಾವತ್ ಸಿನಿ ಪ್ರೊಡಕ್ಷನ್‌ ಲಾಂಛನದಲ್ಲಿ ಹೇಮಂತ್ ನಾಯ್ಕ್.ಕೆ ಹಾಗೂ ಮಂಜುಳಾ ಧರಣೇಶ್ವರ್ ಅವರು ನಿರ್ಮಿಸಿರುವ ‘ಧರ್ಮಪುರ’ ಚಿತ್ರ ಮಾರ್ಚ್‌ ಅಂತ್ಯಕ್ಕೆತೆರೆ ಕಾಣಲಿದೆ.

ಹೇಮಂತ್ ನಾಯ್ಕ್ ಕೆ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಂತೋಷ್ ಬಿ. ಸಂಗೀತ ನೀಡಿದ್ದಾರೆ. ಹೇಮಂತ್ ನಾಯ್ಕ್ ಈ ಹಿಂದೆ ‘ಗರಸ್ಯ’ ಹಾಗೂ ‘ದಾರಿದೀಪ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನೃತ್ಯ ನಿರ್ದೇಶನವನ್ನು ನಿರ್ದೇಶಕರೆ ಮಾಡಿದ್ದಾರೆ.

ರವಿಕುಮಾರ್ ಛಾಯಾಗ್ರಹಣ, ಕವಿತಾ ಎಸ್. ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನವಿದೆ. ರಮೇಶ್ ಪಾಲ್ತ್ಯ, ಅಮೃತ ವಿ.ರಾಜ್, ರಾಣಿ ಪದ್ಮಜಾ ಚವ್ಹಾಣ್, ಯುವರಾಜ್ ರಾಥೋಡ್, ಮುರುಗೇಶ್, ಶಶಿಕಿರಣ್, ಚಂದ್ರಶೇಖರ್ ತಾರಾಗಣದಲ್ಲಿದ್ದಾರೆ.

ಏಪ್ರಿಲ್ 19ಕ್ಕೆ ‘ತ್ರಯಂಬಕಂ’
ಫ್ಯೂಚರ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ‘ತ್ರಯಂಬಕಂ’ ಚಿತ್ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮ ಗೌಡ ತಾರಾಬಳಗದಲ್ಲಿದ್ದಾರೆ. ಅವಿನಾಶ್ ಯು. ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನ, ನವೀನ್‍ಕೃಷ್ಣ ಅವರ ಸಂಭಾಷಣೆ, ಬಿ.ರಾಕೇಶ್ ಅವರ ಛಾಯಾಗ್ರಹಣ ಹಾಗೂ ಸುನೀಲ್ ಕಶ್ಯಪ್ ಅವರ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.