ಕೋಲಾರ: ‘ಮಕ್ಕಳಲ್ಲಿ ನಾಯಕತ್ವ ಕೌಶಲ, ನೈತಿಕ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ ದೇಶದ ಮೊಟ್ಟಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ಮೆಹ್ರಾ ಅವರ ಜೀವನ ಆಧರಿಸಿ ರೂಪಿಸಿರುವ ‘ಪದಕ’ ಚಲನಚಿತ್ರವನ್ನು ಸುತ್ತೂರು ಶ್ರೀಗಳು ಡಿ. 30ರಂದು ಬಿಡುಗಡೆ ಮಾಡುತ್ತಾರೆ’ ಎಂದು ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಚಿತ್ರದ ಸಹ ನಿರ್ಮಾಪಕ ಚಂದ್ರಶೇಖರ್ ತಿಳಿಸಿದರು.
ಇಲ್ಲಿ ಗುರುವಾರ ಪದಕ ಚಲನಚಿತ್ರದ ಆನ್ಲೈನ್ ವೀಕ್ಷಣೆಗೆ ಅವಕಾಶ ಕಲ್ಪಿಸುವ ಟಿಕೆಟ್ಗಳನ್ನು ಬಿಡುಗಡೆ ಮಾಡಿ ಮಾತನಾಡಿ, ‘ರಾಜ್ಯದ 30 ಜಿಲ್ಲೆಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಾದ ಆದಿತ್ಯ ಚಿರಂಜೀವಿ ಸಮ್ಮುಖದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ’ ಎಂದರು.
‘ಚಿತ್ರದಲ್ಲಿ ಬರುವ 1957ರ ಪ್ರಥಮ ಶೌರ್ಯ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ಮೆಹ್ರಾ ಅವರ ಪಾತ್ರವನ್ನು ಕೆಜಿಎಫ್ ಚಿತ್ರದ ಯಶ್ ಬಾಲಕನ ಪಾತ್ರಧಾರಿ ಅನ್ಮೋಲ್ ಭಾಸ್ಕರ್ ನಿರ್ವಹಿಸಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ತುಷಾರ್, ಮಹೇಂದ್ರ, ನಟ ಎಸ್.ಕೆ.ಶ್ರೀಧರ್, ಮಂಜುಳಾ ರೆಡ್ಡಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ವಿವರಿಸಿದರು.
‘ಮಾಜಿ ಪ್ರಧಾನಿ ದಿವಂಗತ ನೆಹರೂ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ 1957ರಲ್ಲಿ ಸಾರ್ವಜನಿಕ ಸಮಾರಂಭ ನಡೆಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಆಗ ಘಟನಾ ಸ್ಥಳದಲ್ಲಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ನ ಹರಿಶ್ಚಂದ್ರ ಮೆಹ್ರಾ ಅವರು 20 ಅಡಿ ಎತ್ತದ ಕಂಬವೇರಿ ಪೆಂಡಾಲ್ ಅನ್ನು ವಿದ್ಯುತ್ ಸಂಪರ್ಕದಿಂದ ಬೇರ್ಪಡಿಸಿ ಹೆಚ್ಚಿನ ಸಾವು ನೋವು ತಪ್ಪಿಸಿದ್ದರು’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್ಬಾಬು, ಗೌರವಾಧ್ಯಕ್ಚ ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್. ಚೌಡಪ್ಪ, ಖಜಾಂಚಿ ವಿಜಯ್, ಚಿತ್ರದ ನಿರ್ಮಾಪಕ ಜಿರಂಜೀವಿ ಆದಿತ್ಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.