ಜನಮೆಚ್ಚಿದ ಚಿತ್ರ ಪ್ರಶಸ್ತಿಯನ್ನು ನಟ ಸಾಯಿಕುಮಾರ್ ಹಾಗೂ ನಿರ್ಮಾಪಕಿ ಪುಷ್ಪ ಅರುಣ್ಕುಮಾರ್ ‘ಶಾಖಾಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಹಾಗೂ ನಿರ್ದೇಶಕ ಸಂದೀಪ್ ಸುಂಕದ್ ಅವರಿಗೆ ಪ್ರದಾನಿಸಿದರು. ಚಿತ್ರತಂಡ ವೇದಿಕೆಯಲ್ಲಿತ್ತು.
ಸಂದೀಪ್ ಸುಂಕದ್ ನಿರ್ದೇಶನದ ಈ ಸಿನಿಮಾ 2024ರಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿ ನಟರಾದ ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರ ನಟನೆ ಪ್ರೇಕ್ಷಕರನ್ನು ಸೆಳೆದಿತ್ತು. ಚೊಚ್ಚಲ ಚಿತ್ರದಲ್ಲೇ ಸಂದೀಪ್ ಭಿನ್ನವಾದ ಸಿನಿಮಾವೊಂದನ್ನು ತೆರೆಗೆ ತಂದಿದ್ದರು. ಈ ಸಿನಿಮಾ ಅತಿ ಹೆಚ್ಚಿನ ಮತಗಳನ್ನು ಪಡೆದು ‘ಟ್ರೆಂಡ್ಸ್’ ಪ್ರಸ್ತುತ ಜನಮೆಚ್ಚಿದ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿತು.
‘ಟ್ರೆಂಡ್ಸ್’ ಜನಮೆಚ್ಚಿದ ಪ್ರಶಸ್ತಿಯನ್ನು ನಟ ಸಾಯಿಕುಮಾರ್ ಮತ್ತು ನಿರ್ಮಾಪಕಿ ಪುಷ್ಪ ಅರುಣ್ಕುಮಾರ್ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ, ‘ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸುತ್ತಿರುವ ‘ಪ್ರಜಾವಾಣಿ’ ಚಿತ್ರರಂಗದ ಪ್ರಗತಿಗೆ
ಕಾರಣವಾಗುತ್ತಿದೆ. ಪತ್ರಿಕೆಯ ಏಜೆಂಟ್ ಆಗಿ ನಾನು ನನ್ನ ಮೊದಲ ವ್ಯವಹಾರ ಆರಂಭಿಸಿದ್ದೆ. ಹೀಗಾಗಿ ಪ್ರಜಾವಾಣಿಯ ಈ ಪ್ರಶಸ್ತಿ ತುಂಬಾ ವಿಶೇಷ. ಈ ಪ್ರಶಸ್ತಿಯ ಸಂಪೂರ್ಣ ಶ್ರೇಯಸ್ಸು ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಮತ್ತು ಇಡೀ ತಂಡಕ್ಕೆ ಸಿಗಬೇಕು. ಪ್ರಶಸ್ತಿಗಳು ಸಂತೋಷ ಕೊಡುತ್ತದೆ, ಆದರೆ ಕನ್ನಡ ಚಿತ್ರರಂಗ ಉಳಿಯಬೇಕು ಎಂದರೆ ಚಿತ್ರಮಂದಿರಗಳಲ್ಲಿ ಜನ ತುಂಬಬೇಕು. ಕನ್ನಡದಲ್ಲೂ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿವೆ. ಅವುಗಳನ್ನು ಪ್ರೋತ್ಸಾಹಿಸಿ’ ಎಂದರು.
‘1975 ನನ್ನ ಮೊದಲ ಸಿನಿಮಾ ರಿಲೀಸ್ ಆಗಿತ್ತು. 2025ಕ್ಕೆ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದೇನೆ. ಈ ಸ್ವರ ಅಪ್ಪ ಕೊಟ್ಟಿದ್ದು, ಸಂಸ್ಕಾರವನ್ನು ಅಮ್ಮ ನೀಡಿದರು. ಆಶೀರ್ವಾದ ಕಲಾದೇವಿಯದ್ದು. ನನ್ನ 50 ವರ್ಷಗಳ ಸಿನಿ ಮೆಲುಕನ್ನು ‘ಪ್ರಜಾವಾಣಿ’ ವೇದಿಕೆ ಮುಖಾಂತರ ಹಂಚಿಕೊಳ್ಳುತ್ತಿರುವುದು ಖುಷಿಯಾಗುತ್ತಿದೆ’ ಎಂದರು ನಟ ಸಾಯಿಕುಮಾರ್.
‘ನಾನು ಸಿನಿಮಾ ನಿರ್ಮಾಣಕ್ಕಿಳಿದು ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕು. ಯಶ್ ಹುಟ್ಟುವುದಕ್ಕಿಂತ ಮೊದಲೇ ನಾನು ಸಾಯಿಕುಮಾರ್ ಅವರ ಚಿತ್ರಗಳನ್ನು ನೋಡಿದ್ದೇನೆ. ದೊಡ್ಡ ಕಲಾವಿದರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಅದರಲ್ಲಿ ಯಶ್ ಹೆಜ್ಜೆ ಇಡುತ್ತಿದ್ದಾನೆ’ಎಂದರು ನಿರ್ಮಾಪಕಿ ಪುಷ್ಪ ಅರುಣ್ಕುಮಾರ್. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.