ADVERTISEMENT

ಮಹೇಶ್‌ಬಾಬುಗೆ ಆ್ಯಕ್ಷನ್‌ ಕಟ್‌ ಹೇಳ್ತಾರಾ ಪ್ರಶಾಂತ್‌ ನೀಲ್‌?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 9:17 IST
Last Updated 18 ಫೆಬ್ರುವರಿ 2020, 9:17 IST
ಪ್ರಶಾಂತ್‌ ನೀಲ್
ಪ್ರಶಾಂತ್‌ ನೀಲ್   

ಹಿಂದೊಮ್ಮೆ ನಿರ್ದೇಶಕ ಪ್ರಶಾಂತ್‌ ನೀಲ್ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರವಷ್ಟೇ ನನ್ನ ಮುಂದಿರುವ ಬಹುದೊಡ್ಡ ಜವಾಬ್ದಾರಿ’ ಎಂದಿದ್ದರು. ಈ ನಡುವೆಯೇ ಅವರು ನಟ ಮಹೇಶ್‌ಬಾಬು ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದಲೇ ಹೊರಬಿದ್ದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಅಲ್ಲು ಅರವಿಂದ್‌ ಅವರು ನಟ ಅಲ್ಲು ಅರ್ಜುನ್‌ ತಂದೆ. ಜೊತೆಗೆ, ದೊಡ್ಡ ನಿರ್ಮಾಪಕರೂ ಹೌದು. ತಮ್ಮ ಕುಟುಂಬದ ಕಲಾವಿದರ ಚಿತ್ರಗಳು ಸೇರಿದಂತೆ ಇತರೇ ನಟರ ಸಿನಿಮಾಗಳಿಗೂ ಅವರು ಬಂಡವಾಳ ಹೂಡುತ್ತಾರೆ. ಈಗ ಮಹೇಶ್‌ಬಾಬು ಅವರ ಕಾಲ್‌ಶೀಟ್ ಅವರಿಗೆ ಸಿಕ್ಕಿದೆ. ಅರವಿಂದ್‌ ಅವರು ಸೂಕ್ತ ಕಥೆಯ ಹುಡುಕಾಟದಲ್ಲಿದ್ದಾರಂತೆ. ಈ ನಿಟ್ಟಿನಲ್ಲಿ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಗೀತ ಗೋವಿಂದಂ’ ಚಿತ್ರದ ನಿರ್ದೇಶಕ ಪರಶುರಾಮ್‌ ಅವರಿಗೂ ಆಫರ್ ನೀಡಿದ್ದರು. ಅದೇಕೋ ಅವರಿಗೆ ಕಥೆ ಒಪ್ಪಿಗೆಯಾಗಿಲ್ಲ.

ಈ ನಡುವೆಯೇ ಪ್ರಶಾಂತ್ ನೀಲ್‌ ಹೇಳಿದ ಕಥೆ ಮಹೇಶ್‌ಬಾಬುಗೆ ಇಷ್ಟವಾಗಿದೆಯಂತೆ. ಅಲ್ಲು ಅರವಿಂದ್‌ ಅವರಿಗೆ ಈ ಕಥೆ ಹೇಳಲು ಸೂಚಿಸಿದ್ದಾರೆ. ಕಥೆಯು ಅರವಿಂದ್‌ಗೆ ಇಷ್ಟವಾದರೆ ‘ಟಾಲಿವುಡ್‌ ಪ್ರಿನ್ಸ್‌’ಗೆ ಪ್ರಶಾಂತ್‌ ಆ್ಯಕ್ಷನ್‌ ಕಟ್‌ ಹೇಳುವುದು ಗ್ಯಾರಂಟಿ.

ADVERTISEMENT

ಮಹೇಶ್‌ಬಾಬು ಸದ್ಯ ‘ಸರಿಲೇರು ನೀಕೆವ್ವರು’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ವೃತ್ತಿಬದುಕಿನಲ್ಲಿಯೇ ಅತಿಹೆಚ್ಚು ಗಳಿಕೆ ಕಂಡ ಚಿತ್ರ ಇದು. ಈಗಾಗಲೇ, ಅವರು ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಮೇ ತಿಂಗಳಿನಲ್ಲಿ ಇದು ಸೆಟ್ಟೇರುವ ನಿರೀಕ್ಷೆಯಿದೆ. ಇದರಲ್ಲಿ ಅವರದು ಪತ್ತೇದಾರಿಯ ಪಾತ್ರ. ಇದಕ್ಕೆ ಬಂಡವಾಳ ಹೂಡುತ್ತಿರುವುದು ದಿಲ್‌ ರಾಜು. ತಮನ್‌ ಸಂಗೀತ ಸಂಯೋಜಿಸಲಿದ್ದಾರೆ. ಇದರ ನಾಯಕಿಯಾಗಿ ಕೈರಾ ಅಡ್ವಾನಿ ನಟಿಸುವ ಸಾಧ್ಯತೆಯಿದೆ. ‘ಸ್ಪೈಡರ್‌’ ಚಿತ್ರದಲ್ಲಿ ಪತ್ತೇದಾರಿಯಾಗಿಯೇ ನಟಿಸಿದ್ದರು. ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಮಗಾಡೆ ಮಲಗಿತ್ತು.

ಕಥೆಗೆ ಅರವಿಂದ್‌ ಗ್ರೀನ್‌ ಸಿಗ್ನಲ್‌ ನೀಡಿದರೆ ವಂಶಿ ಪೈಡಿಪಲ್ಲಿ ನಿರ್ದೇಶನದ ಸಿನಿಮಾದ ಬಳಿಕವಷ್ಟೇ ಪ್ರಶಾಂತ್‌ ನೀಲ್‌ ನಿರ್ದೇಶನದ ಹೊಸ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ. ಪ್ರಸ್ತುತ ಅವರು ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಅವರು ನಟ ಶ್ರೀಮುರಳಿಗಾಗಿ ‘ಉಗ್ರಂ 2’ ಸಿನಿಮಾವನ್ನೂ ನಿರ್ದೇಶಿಸಲಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.