
ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ ಅಭಿಮಾನಿಗಳು
–ಪ್ರಜಾವಾಣಿ ಚಿತ್ರ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ನಾಲ್ಕು ವರ್ಷಗಳು ಉರುಳಿವೆ. ಬುಧವಾರ (ಅ.29) ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಟ ಶಿವರಾಜ್ಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್ ದಂಪತಿ, ಯುವ ರಾಜ್ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿದ ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಪುನೀತ್ ಅವರ ಇಷ್ಟದ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. ಸಮಾಧಿಗೆ ಸಾವಿರಾರು ಜನರು ಭೇಟಿ ನೀಡಿ ನೆಚ್ಚಿನ ನಟನಿಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿವರಾಜ್ಕುಮಾರ್, ‘ನಾಲ್ಕು ವರ್ಷವಲ್ಲ, ಎಷ್ಟೇ ವರ್ಷವಾದರೂ ಅಪ್ಪು ಮೇಲಿನ ಪ್ರೀತಿ ಕಡಿಮೆಯಾಗಲು ಸಾಧ್ಯವೇ ಇಲ್ಲ. ಆತನ ವ್ಯಕ್ತಿತ್ವವೇ ಹಾಗಿತ್ತು. ಅಪ್ಪಾಜಿ, ಅಪ್ಪು ಹೀಗೆ ಕೆಲವು ವ್ಯಕ್ತಿಗಳಿಗಷ್ಟೇ ಇಂತಹ ಪ್ರೀತಿ ಸಿಗಲು ಸಾಧ್ಯ. ಆತನಿಲ್ಲ ಎಂದುಕೊಂಡರೇ ಕಷ್ಟ. ಆತನ ನೆನಪಿನಲ್ಲೇ ಬದುಕುತ್ತಿದ್ದೇವೆ. ಅಪ್ಪುವನ್ನು ನಮ್ಮಲ್ಲೇ ಕಾಣಲು ಪ್ರಯತ್ನಪಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.