ಬೆಂಗಳೂರು: ಬೆಂಗಳೂರು ಮೂಲದ ಖ್ಯಾತ ಫುಡ್ ಬ್ಲಾಗರ್ ಕೃಪಾಲ್ ಅಮನ್ನ ಅವರ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಊಟ ಸವಿದಿದ್ದಾರೆ.
ಅಂದ ಹಾಗೆ, ಲಾಕ್ಡೌನ್ ಸಂದರ್ಭದಲ್ಲಿ ಪುನೀತ್ ಅವರು ಕೃಪಾಲ್ ಅಮನ್ನ ಅವರ ಯೂಟ್ಯೂಬ್ ವಿಡಿಯೊಗಳನ್ನು ಹೆಚ್ಚು ನೋಡುತ್ತಿದ್ದರು. ಈ ಕುರಿತು ಇತ್ತೀಚೆಗಷ್ಟೇ ನಡೆದ ಯುವರತ್ನ ಸಿನಿಮಾ ಸುದ್ದಿಗೋಷ್ಠಿ ಸಂದರ್ಭದಲ್ಲಿ ಪುನೀತ್ ಹೇಳಿಕೊಂಡಿದ್ದರು.
‘ಲಾಕ್ಡೌನ್ನಲ್ಲಿ ಟಿವಿ, ಇಂಟರ್ನೆಟ್ನಲ್ಲೇ ಅರ್ಧ ಸಮಯ ಹೋಯಿತು. ಜೊತೆಗೆ ಹೊಸ ಅಡುಗೆಯ ಪ್ರಯೋಗ. ಪಕ್ಕಾ ನಾನ್ವೆಜಿಟೇರಿಯನ್, ಮಟನ್, ಚಿಕನ್, ಫಿಶ್, ಬೇಳೆ ಸಾರು, ಮನೆ ರೆಸಿಪಿಯಾದ ಮಸಾಲೆ ಚಿತ್ರಾನ್ನ ಮಾಡಿದೆ. ಯೂಟ್ಯೂಬ್ನಲ್ಲಿ ಫುಡ್ಬ್ಲಾಗಿಂಗ್ ಶೋ ಹೆಚ್ಚಾಗಿ ನೋಡುತ್ತೇನೆ. ಬೆಂಗಳೂರಿನವರೇ ಆದ ಕೃಪಾಲ್ ಅಮನ್ನಾ ಅವರ ಫುಡ್ಶೋ ಶೋ ಇಷ್ಟಪಡುತ್ತೇನೆ’ ಎಂದಿದ್ದರು.
ಕೃಪಾಲ್ ಅಮನ್ನ ಫುಡ್ ಲವರ್ಸ್ ಟಿ.ವಿಯ ಸಂಸ್ಥಾಪಕರಾಗಿದ್ದು, ಈ ಯೂಟ್ಯೂಬ್ ಚಾನೆಲ್ಗೆ 6.10 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದಾರೆ. ಹೆಚ್ಚಾಗಿ ಬೆಂಗಳೂರು ಸುತ್ತಮುತ್ತಲಿರುವ ಊರುಗಳಲ್ಲಿರುವ ಹೆಸರುವಾಸಿಯಾದ ಹೋಟೆಲ್ಗಳಿಗೆ ಭೇಟಿ ನೀಡಿ ಅಲ್ಲಿರುವ ತಿಂಡಿ, ತಿನಿಸುಗಳ ರುಚಿ ನೋಡಿ ಜನರಿಗೆ ಈ ಕುರಿತು ಕೃಪಾಲ್ ಮಾಹಿತಿ ನೀಡುತ್ತಾರೆ. ಇವರ ಪ್ರತಿ ವಿಡಿಯೊ 30 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಏ.1ಕ್ಕೆ ಯುವರತ್ನ ಬಿಡುಗಡೆಯಾಗಲಿದ್ದು, ಇದೇ ಸಂದರ್ಭದಲ್ಲಿ ಕೃಪಾಲ್ ಅಮನ್ ಅವರ ಜೊತೆಗೂಡಿ ಪುನೀತ್ ಹಾಗೂ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ಊಟ ಸವಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.