ಬೆಂಗಳೂರು:ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ನಟ ಪುನೀತ್ ರಾಜ್ ಕುಮಾರ್, ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿ ತೆರಳಿದರು. ವಿಚಾರಣೆ ಕುರಿತು ಹೇಳಿಕೆ ನೀಡಿದ ಪುನೀತ್, 'ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಐಟಿ ಅಧಿಕಾರಿಗಳಿಗೆ ನಾನು ಮತ್ತು ನನ್ನ ಕುಟುಂಬ ಸಂಪೂರ್ಣವಾಗಿ ಸಹಕಾರ ನೀಡಿದ್ದೇವೆ' ಎಂದು ಹೇಳಿದ್ದಾರೆ.
'ಐಟಿ ಅಧಿಕಾರಿಗಳು ಯಾರ ಮನೆಯ ಮೇಲಾದರೂ ದಾಳಿ ಮಾಡುತ್ತಾರೆ ಅಂದರೆ ಅದು ಅಕೌಂಟ್ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಆಗಿರುತ್ತದೆ. ನನ್ನ ಮನೆಯ ಮೇಲೆ ದಾಳಿ ನಡೆದಿರುವುದೂ ಅದೇ ಉದ್ದೇಶದಿಂದ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ' ಎಂದು ಅವರು ಹೇಳಿದ್ದಾರೆ.
ಹೈ ಬಜೆಟ್ ಸಿನಿಮಾ ನಟ, ನಿರ್ಮಾಪಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆಯೇ ಎಂಬ ಪ್ರಶ್ನೆಗೂ ಉತ್ತರೊಸಿದ ಪುನೀತ್, 'ಇಂಥ ವಿಷಯಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅನುಮಾನಗಳಿರುತ್ತವೆ. ಆದರೆ ಅವೆಲ್ಲ ಸತ್ಯ ಆಗಿರುವುದಿಲ್ಲ. ಅಧಿಕಾರಿಗಳಿಗೆ ಹೇಗೋ ಮಾಹಿತಿ ಸಿಕ್ಕಿರುತ್ತದೆ. ಅದನ್ನು ಇಟ್ಟುಕೊಂಡು ದಾಖಲೆ ಪರಿಶೀಲನೆ ಮಾಡಲು ಬರುತ್ತಾರೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.