ADVERTISEMENT

ತೆಲುಗಿಗೂ ಕಾಲಿಟ್ಟ ‘ಪುಟ್ಟಗೌರಿ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:30 IST
Last Updated 25 ನವೆಂಬರ್ 2019, 19:30 IST
ರಂಜನಿ ರಾಘವನ್‌
ರಂಜನಿ ರಾಘವನ್‌   

‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಕಿರುತೆರೆಯ ವೀಕ್ಷಕರನ್ನು ಮೋಡಿ ಮಾಡಿದ್ದ ಗೌರಿ ಪಾತ್ರಧಾರಿ ರಂಜನಿ ರಾಘವನ್‌ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಸತ್ಯಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಅವರಿಗೆ ಮೂರನೇ ಚಿತ್ರ. ರಂಜನಿಗೆ ನಾಯಕನಾಗಿ ‘ಗಣಪ’ ಚಿತ್ರದಲ್ಲಿ ನಟಿಸಿದ್ದ ನಟ ಸಂತೋಷ್‌ ಕಾಣಿಸಿಕೊಳ್ಳಲಿದ್ದಾರೆ.

ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಇದೇ 25ರಂದು ಚಿತ್ರದ ಮುಹೂರ್ತ ನಡೆಯಲಿದೆ. ಈ ಚಿತ್ರಕ್ಕೆ ಅಶೋಕ್‌ ಕೆ. ಕಡಬಕಥೆ ಬರೆದು, ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕೆಜಿಎಫ್‌ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ರವಿ ಬಸ್ರೂರು ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಛಾಯಾಗ್ರಹಣ ಸಿನಿ ಟೆಕ್‌ ಸೂರಿ, ಸಂಭಾಷಣೆ ಕೆ.ವಿ. ರಾಜು ಅವರದ್ದು. ಶ್ರೀ ಮಾತಾ ಸಿನಿ ಕ್ರಿಯೇಷನ್ಸ್‌ನಡಿ ಮಹಾಂತೇಶ್‌ ಕೆ. ಬಂಡವಾಳ ಹೂಡುತ್ತಿದ್ದಾರೆ.

ಇದೊಂದು ಕೌಟುಂಬಿಕ ಹಾಸ್ಯ ಪ್ರಧಾನ ಚಿತ್ರ.ಸ್ಕ್ರಿಪ್ಟ್‌ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ನನ್ನ ಹೆಸರು ಗೀತಾ, ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿ. ಪ್ರೀತಿ, ಹಾಸ್ಯವನ್ನು ಉಕ್ಕಿಸುವಂತಹ ಪಾತ್ರ ನನ್ನದು.ಸಯ್ಯಾಜಿ ಶಿಂಧೆ, ಸುಮನ್‌, ಅವಿನಾಶ್‌, ವಿನಯಾ ಪ್ರಸಾದ್‌, ಪವಿತ್ರಾ ಲೋಕೇಶ್‌ ಸೇರಿದಂತೆ ದೊಡ್ಡ ಕಲಾವಿದರ ತಾರಾಬಳಗವೇ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಟಿ ರಂಜನಿ ರಾಘವನ್‌.

ADVERTISEMENT

ಮೊದಲ ಹಂತದ ಚಿತ್ರೀಕರಣಹೈದರಾಬಾದ್‌ ಹಾಗೂ ಆಗುಂಬೆಯಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಎರಡು ಭಾಷೆಗಳ ನೇಟಿವಿಟಿಗೆ ಒಗ್ಗುವಂತೆ ಚಿತ್ರಕಥೆ ಹೆಣೆಯಲಾಗಿದೆ. ಎರಡೂ ಭಾಷೆಗಳಲ್ಲಿಏಕ ಕಾಲಕ್ಕೆ ಚಿತ್ರೀಕರಣ ನಡೆಯಲಿದೆಯಂತೆ.

ರಂಜನಿ ಸದ್ಯ ‘ಇಷ್ಟದೇವತೆ’ ಧಾರಾವಾಹಿಯ ನಿರ್ಮಾಣದ ಜತೆಗೆ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ತೊಡಗಿಸಿಕೊಂಡಿದ್ದಾರೆ. ‘ರಾಜಹಂಸ’ ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಲಗ್ಗೆ ಇಟ್ಟಿದ್ದು,‘ಟಕ್ಕರ್‌’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.