ಒಂದು ಮೊಟ್ಟೆಯ ಕಥೆಯನ್ನು ಸರಳವಾಗಿ, ಸುಂದರವಾಗಿ ಹೇಳಿ ಚಿತ್ರ ರಸಿಕರ ಮನಗೆದ್ದ ಮಂಗಳೂರಿನ ರಾಜ್ ಬಿ. ಶೆಟ್ಟಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿರುವ ಸುದ್ದಿ ಬಂದು ಕೆಲವು ಸಮಯ ಆಯಿತು.
ಈಗ ಅದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುದ್ದಿ ಹೊತ್ತು ತಂದಿರುವ ರಾಜ್, ‘ಮೇ ತಿಂಗಳ ಮಧ್ಯ ಭಾಗದಲ್ಲಿ 10 ದಿನಗಳ ಚಿತ್ರೀಕರಣ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ.
ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿಲ್ಲ. ಅದನ್ನು ಬರೆದು, ಪೂರ್ಣಗೊಳಿಸುವ ಕೆಲಸದಲ್ಲಿ ರಾಜ್ ಅವರು ಮಂಡೆಬಿಸಿ ಮಾಡಿಕೊಂಡು ತೊಡಗಿಕೊಂಡಿದ್ದಾರೆ. ‘ಮೇ ತಿಂಗಳಲ್ಲಿ ಚಿತ್ರೀಕರಣ ಮುಗಿದ ನಂತರ, ಇನ್ನುಳಿದ ಭಾಗವನ್ನು ಮಳೆಗಾಲ ಮುಗಿದ ನಂತರ ಚಿತ್ರೀಕರಿಸಿಕೊಳ್ಳಬೇಕು’ ಎನ್ನುತ್ತಿದ್ದಾರೆ ಅವರು. ಅಂದಹಾಗೆ, ಅವರು ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮಗೊಳಿಸಿಲ್ಲ.
ಇದರಲ್ಲಿ ಇರುವುದು ಮಂಗಳೂರಿನಲ್ಲಿ ನಡೆಯುವ ಗ್ಯಾಂಗ್ಸ್ಟರ್ಗಳ ಕಥೆ. ‘ಹೀರೊ ಯಾರೊ, ಹೀರೊಯಿನ್ ಯಾರು’ ಎಂದು ಪ್ರಶ್ನಿಸಿದರೆ, ‘ನಮ್ಮ ಕಥೆಗಳಲ್ಲಿ ಹೀರೊ, ಹೀರೊಯಿನ್ ಇರುವುದಿಲ್ಲ. ವೀಕ್ಷಕರಿಗೆ ಇಷ್ಟವಾಗುವಂತೆ ಕಥೆ ಇರುತ್ತದೆ’ ಎನ್ನುತ್ತಾರೆ.
ಚಿತ್ರದಲ್ಲಿ ಯಾವ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಹುಡುಕಾಟ ನಡೆಯುತ್ತಿದ್ದು, ಒಂದು ಪಾತ್ರವನ್ನು ರಾಜ್ ಅವರೇ ನಿಭಾಯಿಸಲಿದ್ದಾರೆ. ಈ ಸಿನಿಮಾದ ಪೂರ್ತಿ ಚಿತ್ರೀಕರಣ ಮಂಗಳೂರಿನಲ್ಲೇ ನಡೆಯಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ತರಬೇಕು ಎಂಬ ಹಂಬಲ ಚಿತ್ರತಂಡದಲ್ಲಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.