ADVERTISEMENT

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ನಾಯಕಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 10:23 IST
Last Updated 21 ಅಕ್ಟೋಬರ್ 2022, 10:23 IST
ರಮ್ಯಾ
ರಮ್ಯಾ   

ಮೋಹಕ ತಾರೆ ರಮ್ಯಾ ಏಕಾಏಕಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ರಾಜ್‌ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ತನ್ನ ಬದಲಾಗಿ, ನಟಿ ಸಿರಿ ರವಿಕುಮಾರ್‌ ನಾಯಕಿಯಾಗಿ ನಟಿಸಲಿದ್ದಾರೆ ಎಂದು ರಮ್ಯಾ ಘೋಷಿಸಿದ್ದಾರೆ.

ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ನ ಮೊದಲ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಹೊಸ ಪ್ರೊಜೆಕ್ಟ್‌ ಘೋಷಿಸಲಾಗಿತ್ತು. ಲೈಟರ್‌ ಬುದ್ಧ ಫಿಲ್ಮ್ಸ್‌ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

‘ಹೊಸ ಮುಖವೊಂದು ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಿದೆ ಎನ್ನುವ ಕಾರಣದಿಂದ ರಮ್ಯಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶದಿಂದಲೇ ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ನಿರ್ಮಾಣವಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಒಂದು ಅದ್ಭುತ ದೃಶ್ಯಕಾವ್ಯ. ಇದನ್ನು ತೆರೆಯ ಮೇಲೆ ನೋಡಲು ಪ್ರತಿಯೊಬ್ಬರೂ ಕಾತುರದಿಂದಿದ್ದೇವೆ’ ಎಂದು ಆ್ಯಪಲ್‌ ಬಾಕ್ಸ್‌ ಸಂಸ್ಥೆ ತಿಳಿಸಿದೆ.

ADVERTISEMENT

ಈ ಪೋಸ್ಟ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ರಮ್ಯಾ, ‘ಶೀಘ್ರದಲ್ಲೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದೇನೆ. ಸ್ವಲ್ಪ ವೈಟ್‌ ಮಾಡಿ’ ಎಂದು ಉಲ್ಲೇಖಿಸಿದ್ದಾರೆ.

ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಕಥೆ, ನಿರ್ದೇಶನ ರಾಜ್‌ ಬಿ. ಶೆಟ್ಟಿ ಅವರದ್ದೇ. ರಾಜ್‌ ಅವರ ‘ಗರುಡ ಗಮನ ವೃಷಭ ವಾಹನ’ ಚಿತ್ರದ ತಾಂತ್ರಿಕ ತಂಡವೇ ಇಲ್ಲಿ ಕೆಲಸ ಮಾಡಲಿದೆ. ಮಿಥುನ್‌ ಮುಕುಂದನ್‌ ಅವರ ಸಂಗೀತ, ಪ್ರವೀಣ್‌ ಶ್ರೀಯಾನ್‌ ಅವರ ಸಂಗೀತ ಈ ಚಿತ್ರಕ್ಕಿದೆ.

‘ಸಕುಟುಂಬ ಸಮೇತ’, ‘ಆಬ್ರಕಡಾಬ್ರ’ ಸಿನಿಮಾದಲ್ಲಿ ನಟಿಸಿರುವ ಸಿರಿ ರವಿಕುಮಾರ್‌, ಸದ್ಯ ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ. ದಿಗಂತ್ ಮಂಚಾಲೆ, ರಿಷಬ್ ಶೆಟ್ಟಿ, ಅಚ್ಯುತಕುಮಾರ್ ತಾರಾಬಳಗದಲ್ಲಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.