ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ‘ರಂಗಿನ ರಾಟೆ’ ಚಿತ್ರದ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಪೋಸ್ಟರ್ ಬಿಡುಗಡೆಯಾಗಿದೆ.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟಿದ್ದೇನೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ಪರಿಚಯವಾದ ಕವಿತಾ ಅರುಣ್ ಕುಮಾರ್ ಅವರು ಈ ಚಿತ್ರ ನಿರ್ಮಿಸಲು ಒಪ್ಪಿದರು. ಸದ್ಯದಲ್ಲೇ ಡಬ್ಬಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ಮುಗಂ ಮಾಹಿತಿ ನೀಡಿದರು.
‘‘ಯವರಾಜ’ ಚಿತ್ರದಿಂದ ನನ್ನ ಸಿನಿ ಪಯಣ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು’ ಎಂದರು ರಾಜೀವ್ ರಾಥೋಡ್.
ಸಂತೋಷ್ ಮಳವಳ್ಳಿ ಅವರು ಹಾಡುಗಳಿಗೆ ಸಾಹಿತ್ಯ ಬರೆದು ನಟಿಸಿದ್ದಾರೆ. ಚಂದ್ರು ಒಬ್ಬಯ್ಯ ಅವರ ಸಂಗೀತವಿದೆ. ರವಿ ಸುವರ್ಣ ಛಾಯಾಗ್ರಹಣ, ದಾಮೋದರ ನಾಯ್ಡು ಅವರ ಸಂಕಲನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.