ಅದು ಮುರಳಿ ಎಸ್.ವೈ. ನಿರ್ದೇಶನದ ‘ರಿವೀಲ್’ ಚಿತ್ರದ ಹಾಡುಗಳರಿವೀಲ್ ಕಾರ್ಯಕ್ರಮ. ಕುತೂಹಲ ಹೆಚ್ಚಿಸಬೇಕು ಎಂದೋ ಏನೋ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆಯ ನಂತರವೇ ಕಾರ್ಯಕ್ರಮ ಶುರುವಾಯ್ತು. ಅಷ್ಟಾಗಿಯೂ ಚಿತ್ರರಂಗದ ಒಬ್ಬರೂ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನೇನೂ ರಿವೀಲ್ ಮಾಡಲಿಲ್ಲ.
‘ಮೂರು ತಿಂಗಳು ಸಿದ್ಧತೆ ಮಾಡಿ ಈ ಸಿನಿಮಾ ಮಾಡಿದ್ದೇವೆ. ಹಲವು ಗೊಂದಲಗಳು, ನೋವು, ಸವಾಲು ಎಲ್ಲವನ್ನೂ ದಾಟಿ ಈ ಹಂತಕ್ಕೆ ಬಂದು ತಲುಪಿದ್ದೇವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ. ಮಡಕೇರಿ, ಮೈಸೂರು, ಬೆಂಗಳೂರು, ದಾವಣಗೆರೆಗಳಲ್ಲಿ ಶೂಟ್ ಮಾಡಿದ್ದೇವೆ. ಇದು ನಿಧಿಯ ಸುತ್ತ ಹೆಣೆದ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಪ್ರೇಕ್ಷಕರು ಕೊಟ್ಟ ಹಣಕ್ಕೆ ಖಂಡಿತ ಮೋಸ ಇಲ್ಲ’ ಎಂದು ಭರವಸೆ ನೀಡಿದರು ನಿರ್ದೇಶಕ ಮುರಳಿ.
ಅಧೈತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಟನಾಗುತ್ತಿದ್ದಾರೆ. ‘ಮಡಿಕೇರಿಯಿಂದ ನಲ್ವತ್ತು ಕಿ.ಮೀ. ದೂರದ ಅರಮನೆಗೆ ಸಂಬಂಧಿಸಿದ ಕಥೆ ಇದು. ಆ ಅರಮನೆ ಇನ್ನೂರು ವರ್ಷ ಹಳೆಯದು. ಇನ್ನೂ ಗಟ್ಟಿಮುಟ್ಟಾಗಿಯೇ ಇದೆ. ಅದೇ ಈ ಸಿನಿಮಾದ ಕೇಂದ್ರ’ ಎನ್ನುವುದು ಅಧೈತ್ ವಿವರಣೆ. ‘ರಿವೀಲ್’ ಚಿತ್ರದ ಕಥೆಗೆ ಹಲವು ಬಗೆಯ ಶೇಡ್ಗಳಿವೆಯಂತೆ. ‘ಇಷ್ಟು ಅದ್ಭುತ ಕತೆ ಇರುವ ಸಿನಿಮಾಕ್ಕೆ ನಾಯಕ ಆಗಿರುವುದು ಅದೃಷ್ಟ’ ಎಂದೂ ಅಧೈತ್ ಹೇಳಿಕೊಂಡರು.
ಜಯಸುಧಾ ಹಾಗೂ ಸುಧಾಕರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾದಲ್ಲಿನ ಒಂದು ಡ್ಯೂಯೆಟ್ ಸಾಂಗ್ ಮತ್ತು ಇನ್ನೊಂದು ಸ್ಫೂರ್ತಿಗೀತೆಗೆ ವಿಜಯ ಯಾರ್ಡ್ಲಿ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಹಾಡುಗಳನ್ನು ಕೊಂಡುಕೊಂಡಿದೆ. ಆದ್ಯಾ ಎನ್ನುವ ಹುಡುಗಿ ಈ ಚಿತ್ರದ ನಾಯಕಿ. ಅವರಿಗಿದು ಎರಡನೇ ಸಿನಿಮಾ.
ಜನವರಿಯಲ್ಲಿ ‘ರಿವೀಲ್’ ಅನ್ನು ತೆರೆಯ ಮೇಲೆ ರಿವೀಲ್ ಮಾಡುವ ಯೋಜನೆ ತಂಡದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.