‘ಮಾಂಜ್ರಾ’ ಅಂದರೆ ಬೀದರ್ ತಾಲ್ಲೂಕಿನಲ್ಲಿ ಇರುವ ಒಂದು ನದಿ. ಆದರೆ, ನಿರ್ದೇಶಕ ಮುತ್ತುರಾಜ್ ರೆಡ್ಡಿ ಅವರ ಪಾಲಿಗೆ ಇದೊಂದು ಅಪರೂಪದ ಪ್ರೇಮಕಥೆ.
2005ರಲ್ಲಿ ಬೆಳಗಾವಿ ಸಮೀಪ ನಡೆದ ನೈಜ ಪ್ರೇಮಕಥೆಯೊಂದನ್ನು ಆಧರಿಸಿ ರೆಡ್ಡಿ ಅವರು ‘ಮಾಂಜ್ರಾ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ‘ಇದು ಶಂಕರ್ ಎನ್ನುವ ವ್ಯಕ್ತಿಯೊಬ್ಬರ ಪ್ರೇಮಕಥೆಯನ್ನು ಆಧರಿಸಿದೆ. ಇವರ ಕಥೆಯನ್ನು ನಾನು ತೆಲುಗು ಸುದ್ದಿಪತ್ರಿಕೆಯೊಂದರ ಮೂಲಕ ಓದಿ ತಿಳಿದುಕೊಂಡೆ. ಆ ಕಥೆಯನ್ನು ಸಿನಿಮಾ ಮಾಡಬೇಕು ಎಂದು ನನಗೆ ಆಗಲೇ ಅನಿಸಿತ್ತು’ ಎಂದು ರೆಡ್ಡಿ ಹೇಳಿದರು.
ತಮ್ಮ ಸಿನಿಮಾ ಕುರಿತು ಒಂದಿಷ್ಟು ವಿವರ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ‘ಶಂಕರ್ ಅವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿ ದ್ದರು. ಆದರೆ ಒಂದು ದಿನ ಆ ಯುವತಿ ಸಾವನ್ನಪ್ಪಿದರು. ಅವರದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ತಮ್ಮ ಪ್ರೇಯಸಿಗೆ ಕಾಲ್ಗೆಜ್ಜೆ ತೊಡಿಸಬೇಕು ಎಂದು ಶಂಕರ್ ಒಂದು ಜೊತೆ ಕಾಲ್ಗೆಜ್ಜೆ ತಂದಿಟ್ಟುಕೊಂಡಿದ್ದರು. ಆದರೆ, ಅದನ್ನು ಆಕೆಗೆ ತೊಡಿಸಬೇಕು ಎಂಬ ಆಸೆ ಈಡೇರಲಿಲ್ಲ’ ಎಂದು ಕಥೆಯನ್ನು ರೆಡ್ಡಿ ವಿವರಿಸಿದರು.
‘ಪ್ರೇಯಸಿ ಮೃತಪಟ್ಟ ನಂತರ ಶಂಕರ್ ಅವರಿಗೆ ಬುದ್ಧಿಭ್ರಮಣೆ ಆಯಿತು. ಅವರು ಈಗ ಸರಿಯಾಗಿ ಮಾತನಾಡಲಾರರು. ಹಾಗಾಗಿ, ತಮ್ಮ ಕಥೆಯನ್ನು ಹೇಳಿಕೊಳ್ಳಲು ಈಗ ಅವರಿಂದ ಆಗುತ್ತಿಲ್ಲ. ಆದರೆ, ಅವರ ಸ್ನೇಹಿತರ ಜೊತೆ ಮಾತನಾಡಿ ಅವರ ಕಥೆ ಏನು ಎಂಬುದನ್ನು ತಿಳಿದುಕೊಳ್ಳಲಾಗಿದೆ’ ಎಂದರು ರೆಡ್ಡಿ. ಪುಣೆಯ ರಂಜಿತ್ ಸಿಂಗ್ ಅವರು ಈ ಚಿತ್ರದ ನಾಯಕ ನಟನಾಗಿ ಅಭಿನಯಿಸಿದ್ದಾರೆ. ‘ಈ ಚಿತ್ರದ ನಾಯಕ ಹಳ್ಳಿ ಹುಡುಗ. ನಾನು ಪಟ್ಟಣದವನು. ಹಾಗಾಗಿ, ಹಳ್ಳಿಯ ಯುವಕನಂತೆ ನಟಿಸಲು ತರಬೇತಿ ಪಡೆಯಬೇಕಾಯಿತು’ ಎಂದರು ರಂಜಿತ್. ಅಪೂರ್ವ ಅವರು ಈ ಚಿತ್ರದ ನಾಯಕಿ. ರಂಜನ್ ಪನಗುತ್ತಿ ಅವರು ಖಳನಾಯಕನಾಗಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.