ವಿಜಯ ರಾಘವೇಂದ್ರ ನಟನೆಯ ಕಿಶೋರ್ ಮೂಡಬಿದ್ರೆ ನಿರ್ದೇಶನದ ‘ರಿಪ್ಪನ್ಸ್ವಾಮಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಸದಾ ಭಿನ್ನ ಪಾತ್ರಗಳನ್ನು ಅರಸುವ ವಿಜಯ ರಾಘವೇಂದ್ರ ಅವರು ಈ ಸಿನಿಮಾದಲ್ಲೂ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 29ಕ್ಕೆ ಸಿನಿಮಾ ತೆರೆ ಕಾಣಲಿದೆ.
‘ಪಾತ್ರಗಳಲ್ಲಿ ಒಳ್ಳೆಯವನಾಗಿ ಕಾಣಿಸಿಕೊಂಡು ಸಾಕಾಗಿದೆ. ಸ್ವಲ್ಪ ಬೇರೆ ಮಾದರಿಯ ಪಾತ್ರ ಮಾಡಬೇಕು ಎಂದು ‘ಮಾಲ್ಗುಡಿ ಡೇಸ್’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಿಶೋರ್ಗೆ ತಮಾಷೆಯಾಗಿ ಹೇಳಿದ್ದೆ. ಕಿಶೋರ್ ಈ ಕಥೆಯನ್ನು ತಂದಾಗ ದಯವಿಟ್ಟು ನನಗೆ ಕಾಯುವುದಕ್ಕೆ ಹೋಗಬೇಡಿ. ಯಾರಿಗಾದ್ರೂ ಈ ಕಥೆ ಕೊಟ್ಟು ಮಾಡ್ಸಿ ಎಂದಿದ್ದೆ. ಅವರು ನನಗಾಗಿಯೇ ಎರಡು ವರ್ಷ ಕಾದರು. ಅಷ್ಟು ಹುಚ್ಚುತನದಿಂದ ಈ ಸಿನಿಮಾವನ್ನು ಮಾಡಿದ್ದೇವೆ. ಯಾವುದೇ ಪಾತ್ರ ಮಾಡಿದರೂ ಚೆನ್ನಾಗಿ ಮಾಡಿದ್ದೀಯಾ ಅಂತ ಅನ್ನಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ. ಈ ಸಿನಿಮಾದಲ್ಲೂ ಅದು ಆಗಿದೆ’ ಎಂದರು ವಿಜಯ ರಾಘವೇಂದ್ರ.
ನಿರ್ಮಾಪಕ ಚಿನ್ನೇಗೌಡ ಮಾತನಾಡಿ, ‘ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಸಿನಿಮಾದಲ್ಲಿ ಮಾಡಿದ ವಿಜಯ ರಾಘವೇಂದ್ರ ಇವನೇನಾ ಅನ್ನಿಸಿತು. ಅಷ್ಟು ಭಿನ್ನವಾಗಿ ಈ ಪಾತ್ರ ಮೂಡಿಬಂದಿದೆ. ಒಬ್ಬ ಕಲಾವಿದನಿಗೆ ಇರಬೇಕಾದ ಗುಣಗಳನ್ನ ಒಪ್ಪಿಕೊಂಡು ಬೆಳೆದಿದ್ದಾನೆ. ನನ್ನ ಮಗ ವಿಜಯ ರಾಘವೇಂದ್ರ ಕಲಾವಿದನಾಗಿ ಬೆಳೆದಿದ್ದಾನೆ’ ಎಂದರು.
ಚಿತ್ರದಲ್ಲಿ ‘ಮಂಗಳ’ ಎಂಬ ಪಾತ್ರದಲ್ಲಿ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಪಂಚಾನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆದಿದೆ. ಸ್ಯಾಮ್ಯುವೆಲ್ ಅಭಿ ಸಂಗೀತ ನಿರ್ದೇಶನ, ರಂಗನಾಥ್ ಸಿ.ಎಂ. ಛಾಯಾಚಿತ್ರಗ್ರಹಣ ಸಿನಿಮಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.