ADVERTISEMENT

‘ರಾಬರ್ಟ್‌’ಗೆ ಐಶ್ವರ್ಯ ರೈ ನಾಯಕಿಯಲ್ಲ: ವದಂತಿಗೆ ತೆರೆ ಎಳೆದ ನಟ ದರ್ಶನ್

​ಪ್ರಜಾವಾಣಿ ವಾರ್ತೆ
Published 6 ಮೇ 2019, 10:01 IST
Last Updated 6 ಮೇ 2019, 10:01 IST
ದರ್ಶನ್ ಹಾಗೂ ಐಶ್ವರ್ಯ ರೈ
ದರ್ಶನ್ ಹಾಗೂ ಐಶ್ವರ್ಯ ರೈ   

‘ರಾಬರ್ಟ್‌’ ಚಿತ್ರದಲ್ಲಿ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ಗೆ ಬಾಲಿವುಡ್‌ ನಟಿ ಐಶ್ವರ್ಯ ರೈ ನಾಯಕಿಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೆ ತೆರೆಬಿದ್ದಿದೆ. ‘ಐಶ್ವರ್ಯ ರೈ ಅವರನ್ನು ನಮ್ಮ ಚಿತ್ರಕ್ಕೆ ಕರೆತರುವ ಮಟ್ಟಕ್ಕೆ ನಾವು ಬೆಳೆದಿಲ್ಲ’ ಎಂಬ ಹೇಳಿಕೆ ನೀಡುವ ಮೂಲಕ ದರ್ಶನ್‌ ಅವರೇ ವದಂತಿಗೆ ತೆರೆ ಎಳೆದಿದ್ದಾರೆ.

‘ರಾಬರ್ಟ್’ ಸಿನಿಮಾದ ಮುಹೂರ್ತ ನಗರದ ಬನಶಂಕರಿ ದೇಗುಲದಲ್ಲಿ ಸೋಮವಾರ ನಡೆಯಿತು. ಇದರಲ್ಲಿ ಐಶ್ವರ್ಯ ರೈ ನಟಿಸುತ್ತಾರೆ ಎಂಬ ಸುದ್ದಿ ಡಿ ಬಾಸ್‌ ಅಭಿಮಾನಿಗಳಲ್ಲಿ ಖುಷಿಯ ಅಲೆ ಎಬ್ಬಿಸಿತ್ತು.

‘ಚೌಕ’ ಚಿತ್ರ ನಿರ್ದೇಶಿಸಿದ್ದ ತರುಣ್ ಸುಧೀರ್ ಅವರೇ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ದಚ್ಚು ಅನ್ನವನ್ನು ತ್ಯಜಿಸಿದ್ದಾರಂತೆ. ‘ತರುಣ್‌ ನನ್ನ ಆಹಾರವನ್ನೂ ಕಿತ್ತುಕೊಂಡಿದ್ದಾನೆ. ಇನ್ನೂ ಆತ ಏನು ಹೇಳುತ್ತಾನೋ ಅದನ್ನೇ ಮಾಡುತ್ತೇನೆ. ‘ಚೌಕ’ದಲ್ಲಿ ಅವನ ಸಾಮರ್ಥ್ಯ ನೋಡಿದ್ದೇವೆ. ಒಳ್ಳೆಯ ಚಿತ್ರ ನೀಡುವುದು ನಮ್ಮ ಗುರಿ’ ಎಂದರು ದರ್ಶನ್.

ADVERTISEMENT

‘ಈ ಚಿತ್ರದ ಪಾತ್ರಕ್ಕಾಗಿ ಗಡ್ಡ ಬಿಟ್ಟಿಲ್ಲ. ಆದರೆ, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ನಿಜ. ನಾನು ಶಬರಿಯಾಗಿ ಅಥವಾ ರಾವಣನಾಗಿ ಕಾಣಿಸಿಕೊಳ್ಳುತ್ತೇನೋ ಎನ್ನುವುದು ಒಂದು ವರ್ಷದ ಬಳಿಕ ನಿಮಗೆ ಗೊತ್ತಾಗಲಿದೆ. ನೀವು ಊಹೆ ಮಾಡಿದ್ದಕ್ಕಿಂತ ಭಿನ್ನವಾಗಿ ಕಾಣಿಸಿಕೊಳ್ಳುವುದಂತೂ ದಿಟ’ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಲು ದರ್ಶನ್‌ ನಿರಾಕರಿಸಿದರು.

ಮಂಗಳವಾರದಿಂದ ಕಂಠೀರವ ಸ್ಟುಡಿಯೊದಲ್ಲಿ ಶೂಟಿಂಗ್‌ ಆರಂಭವಾಗಲಿದೆ. ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.