ADVERTISEMENT

ಮಹೇಶ್‌ ಬಾಬು ಹೊಸ ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್‌ ಕಟ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 10:30 IST
Last Updated 18 ಏಪ್ರಿಲ್ 2020, 10:30 IST
ಎಸ್.ಎಸ್. ರಾಜಮೌಳಿ  
ಎಸ್.ಎಸ್. ರಾಜಮೌಳಿ     

ಅದು ಮೂರು ವರ್ಷದ ಹಿಂದಿನ ಸನ್ನಿವೇಶ. ನಟ ಮಹೇಶ್‌ ಬಾಬು ಪಾಲಿಗೆ ಗೆಲುವು ಮರೀಚಿಕೆಯಾಗಿತ್ತು. ಸೋಲಿನ ಸಂಕೋಲೆ ಕಳಚಿಕೊಳ್ಳಲು ನಿರ್ದೇಶಕ ಕೊರಟಾಲ ಶಿವ ಅವರ ಜೊತೆಗೆ ಚರ್ಚಿಸಿದರು. ಈ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡ ‘ಭರತ ಅನೆ ನೇನು’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿಯಾಗಿಯೇ ಸದ್ದು ಮಾಡಿತು. ಅದಾದ ಬಳಿಕ ನಟಿಸಿದ ‘ಮಹರ್ಷಿ’, ‘ಸರಿಲೇರು ನೀಕೆವ್ವರು’ ಸಿನಿಮಾಗಳ ಯಶಸ್ಸಿನ ಮೂಲಕ ಈಗ ಮಹೇಶ್‌ ಬಾಬು ಹ್ಯಾಟ್ರಿಕ್‌ ಗೆಲುವಿನಲ್ಲಿ ತೇಲುತ್ತಿದ್ದಾರೆ.

ಪ್ರಸ್ತುತ ಪರಶುರಾಮ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಮಹೇಶ್‌ ಬಾಬು ಅವರು ಎಸ್‌.ಎಸ್. ರಾಜಮೌಳಿ ಅವರ ಹೊಸ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ವರ್ಷದ ಆರಂಭದಲ್ಲಿ ಪ್ರಭಾಸ್‌ ಮತ್ತು ರಾಜಮೌಳಿ ಕಾಂಬಿನೇಷನ್‌ನಡಿ ಹೊಸ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಡಿತ್ತು. ‘ಆರ್‌ಆರ್‌ಆರ್‌ ಸಿನಿಮಾ ಮುಗಿದ ಬಳಿಕ ಮಹೇಶ್‌ ಬಾಬು ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುವುದು ನಿಶ್ಚಿತ’ ಎಂದು ರಾಜಮೌಳಿ ಅವರೇ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹಿಂದೆಯೇ ಈ ಇಬ್ಬರು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತುಕತೆ ನಡೆದಿತ್ತಂತೆ. ಈಗ ಅದು ಅಧಿಕೃತಗೊಂಡಿದೆ.ಈಗಾಗಲೇ, ರಾಜಮೌಳಿ ಹೊಸ ಸಿನಿಮಾದ ಸ್ಕ್ರಿಪ್ಟ್‌ ತಯಾರಿ ನಡೆಸಿದ್ದಾರೆ ಎಂಬ ಸುದ್ದಿಯಿದೆ. ದುರ್ಗಾ ಆರ್ಟ್ಸ್‌ನಡಿ ಕೆ.ಎಲ್‌. ನಾರಾಯಣ ಇದಕ್ಕೆ ಬಂಡವಾಳ ಹೂಡಲಿದ್ದಾರೆ.

ADVERTISEMENT

ಶ್ರದ್ಧಾ ಕಪೂರ್‌ ಎಂಟ್ರಿ?

ಮಹೇಶ್‌ ಬಾಬು ಮತ್ತು ಪರಶುರಾಮ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಪ್ರಿನ್ಸ್‌ ಜೊತೆಗೆ ಯಾರು ರೊಮ್ಯಾನ್ಸ್‌ ಮಾಡಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಕಾಡುತ್ತಿದೆ.

ನಟಿ ಕೀರ್ತಿ ಸುರೇಶ್‌ ಇದರಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿದೆ. ಈಗ ಚಿತ್ರಕ್ಕೆ ಬಂಡವಾಳ ಹೂಡಿರುವ ಮೈತ್ರಿ ಮೂವಿ ಮೇಕರ್ಸ್‌ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಅವರನ್ನು ಕರೆ ತರಲು ನಿರ್ಧರಿಸಿದೆ. ಆಕೆಯೊಟ್ಟಿಗೆ ಮಾತುಕತೆಯನ್ನೂ ನಡೆಸಿದೆ. ಇನ್ನೂ ಆಕೆ ಹಸಿರು ನಿಶಾನೆ ತೋರಿಲ್ಲವಂತೆ. ಸುಜಿತ್‌ ರೆಡ್ಡಿ ನಿರ್ದೇಶಿಸಿದ್ದ ‘ಸಾಹೊ’ ಚಿತ್ರದಲ್ಲಿ ಪ್ರಭಾಸ್‌ ಜೊತೆಗೆ ಶ್ರದ್ಧಾ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.