ನಟ ಶಿವರಾಜ್ಕುಮಾರ್ ಅಭಿನಯದ ‘ಭೈರತಿ ರಣಗಲ್’ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಗೆ ಬರಲಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನರ್ತನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಭೈರತಿ ರಣಗಲ್’ ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಅಲ್ಲಿದ್ದ ಭೈರತಿ ರಣಗಲ್ನ ಸಣ್ಣ ಕಥೆಯನ್ನು ನಿರ್ದೇಶಕರು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್ ಆಗುತ್ತಾನೆ? ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂಬುದನ್ನು ಇಲ್ಲಿ ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಕಥೆ ನಿರೂಪಿಸಿದ್ದೇವೆ. ಎಷ್ಟು ಬೇಕೋ ಅಷ್ಟು ಮಾತಿದೆ. ನಿರ್ದೇಶಕ ನರ್ತನ್ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎಂದರು ಶಿವಣ್ಣ.
ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ.
‘ಶಿವಣ್ಣ ಈ ಚಿತ್ರದಲ್ಲಿ ಆ ಡ್ರೆಸ್ ಯಾಕೆ ಹಾಕುತ್ತಾರೆ? ಎನ್ನುವುದೇ ಚಿತ್ರದ ಕಥೆ. ‘ಮಫ್ತಿ’ ಚಿತ್ರ ಮಾಡುವಾಗಲೇ, ಆ ಪಾತ್ರದ ತೂಕ ಹೆಚ್ಚಿತ್ತು. ಆ ಪಾತ್ರವನ್ನು ಇಷ್ಟಕ್ಕೆ ಮುಗಿಸಬಾರದು, ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್ ಹಿಂದಿನ ಕಥೆ ಸೃಷ್ಟಿಯಾಯಿತು. ಈಗಾಗಲೇ ಶೇ70 ರಷ್ಟು ಚಿತ್ರೀಕರಣ ಮುಗಿದಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು.
ಚಿತ್ರಕ್ಕೆ ನವೀನ್ ಕುಮಾರ್ ಛಾಯಾಚಿತ್ರಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.