ಬೆಂಗಳೂರು: ಮೈಸೂರಿನಲ್ಲಿ ‘ಬಘೀರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶ್ರೀಮುರಳಿ ಅವರ ಕಾಲು ಮತ್ತು ಕೈಗೆ ಏಟು ಬಿದ್ದಿದ್ದು, ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
‘ಮೈಸೂರಿನಲ್ಲಿ ‘ಬಘೀರ’ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ಐದಾರು ದಿನಗಳ ಶೂಟಿಂಗ್ ಇದಾಗಿತ್ತು. ಚಿತ್ರೀಕರಣದ ವೇಳೆ ಶ್ರೀಮುರಳಿ ಅವರಿಗೆ ಗಾಯವಾಗಿದೆ. ಎರಡು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಇದಾದ ಬಳಿಕ ಅವರು ಶೂಟಿಂಗ್ಗೆ ಮರಳಲಿದ್ದಾರೆ. ಚಿಕಿತ್ಸೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ’ ಎಂದು ಹೊಂಬಾಳೆ ಫಿಲ್ಮ್ಸ್ನ ಚಲುವೇಗೌಡ ತಿಳಿಸಿದ್ದಾರೆ.
ಈ ಹಿಂದೆ ‘ಮದಗಜ’ ಸಿನಿಮಾದ ಚಿತ್ರೀಕರಣದ ವೇಳೆಯೂ ಶ್ರೀಮುರಳಿ ಕಾಲಿಗೆ ಏಟು ಮಾಡಿಕೊಂಡಿದ್ದರು. ನಂತರದಲ್ಲಿ ‘ಬಘೀರ’ ಸಿನಿಮಾದ ಶೂಟಿಂಗ್ ವೇಳೆ ಕಾಲಿಗೆ ಗಾಯವಾಗಿತ್ತು. ಇದರಿಂದ ಚೇತರಿಸಿಕೊಂಡು ಮತ್ತೆ ಶೂಟಿಂಗ್ ಪುನರಾರಂಭಿಸಿದ್ದರು. ‘ಉಗ್ರಂ’ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಕಾಂಬಿನೇಷನ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಡಾ. ಸೂರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಬಘೀರ’ನಿಗೆ ನಟಿ ರುಕ್ಮಿಣಿ ವಸಂತ್ ಜೋಡಿಯಾಗಿದ್ದು, ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.