ಬಾಲಿವುಡ್ನಲ್ಲಿ ಕುಸ್ತಿ ಕುರಿತಾದ ‘ದಂಗಲ್’ ಸಿನಿಮಾ ಬಂದಿತ್ತು. ಇದೀಗ ಕನ್ನಡದಲ್ಲೂ ಇಂತಹ ಒಂದು ಪ್ರಯತ್ನ ನಡೆದಿದೆ. ಕ್ರಿಕೆಟ್ ಮೇಲೆ ಆಸಕ್ತಿ ಹೊತ್ತ ಮಂಡ್ಯದ ಹುಡುಗಿಯ ಕನಸನ್ನು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಜೇಶ್ ಭಾಗವತ್.
ಇತ್ತೀಚೆಗೆ ಸಿನಿಮಾದ ಟ್ರೇಲರ್ ಅನ್ನು ಕ್ರಿಕೆಟ್ ಆಟಗಾರ ಕೃಷ್ಣಪ್ಪ ಗೌತಮ್ ಬಿಡುಗಡೆಗೊಳಿಸಿದರು. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಸಾರಿಕಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ವಿಷಯವನ್ನಿಟ್ಟುಕೊಂಡು ಇದೇ ಮೊದಲ ಬಾರಿಗೆ ಸಿನಿಮಾವೊಂದು ನಿರ್ಮಾಣವಾಗಿದೆ ಎಂದಿದೆ ಚಿತ್ರತಂಡ. ‘ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಪಾತ್ರಕ್ಕಾಗಿ ಸಾರಿಕಾ ರಣಜಿ ಆಟಗಾರ ಕೆ.ಬಿ. ಪವನ್ ಬಳಿ ಕ್ರಿಕೆಟ್ ತರಬೇತಿ ಪಡೆದುಕೊಂಡಿದ್ದರು’ ಎಂದಿದ್ದಾರೆ ಮಂಜೇಶ್.
ಮಾ ಕ್ರಿಯೆಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಸುಧಾರಾಣಿ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಆಂಥೋನಿ ರುತ್ ವಿನ್ಸೆಂಟ್ ಛಾಯಾಚಿತ್ರಗ್ರಹಣ, ಸೂರಜ್ ಜೋಯಿಸ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.