ADVERTISEMENT

ಪ್ರೀತಿಯ ಜಾಡಿಗೆ ಹೊರಳಿದ ಧನ್‌ವೀರ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 11:18 IST
Last Updated 24 ಜೂನ್ 2019, 11:18 IST
ಧನ್‌ವೀರ್
ಧನ್‌ವೀರ್   

‘ಬಜಾರ್‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದವರು ನಟ ಧನ್‌ವೀರ್‌. ಸಿಂಪಲ್‌ ಸುನಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪಾರಿವಾಳದ ಬೆಟ್ಟಿಂಗ್‌ ಮತ್ತು ರೌಡಿಸಂ ಸುತ್ತ ಕಥೆ ಹೊಸೆಯಾಗಿತ್ತು. ಶೋಕ್ದಾರ್‌ ಆಗಿ ಲವಲವಿಕೆಯಿಂದಲೇ ನಟಿಸಿದ್ದ ಧನ್‌ವೀರ್‌ ಗಾಂಧಿನಗರದಲ್ಲಿ ಯಶಸ್ವಿಯಾಗಿಯೇ ಅಂಬೆಗಾಲಿಟ್ಟಿದ್ದರು.

ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ದೊಡ್ಡಮಟ್ಟದ ಸದ್ದು ಮಾಡಲಿಲ್ಲ. ಆದರೆ, ಹೂಡಿದ್ದ ಬಂಡವಾಳಕ್ಕೆ ಮೋಸವಾಗಿರಲಿಲ್ಲ. ಈ ಚಿತ್ರವನ್ನು ಅಮೆಜಾನ್‌ ಪ್ರೇಮ್‌ ಕೊಂಡುಕೊಂಡಿದ್ದರಿಂದ ಧನ್‌ವೀರ್‌ಗೂ ಅಭಿಮಾನಿಗಳ ಪಡೆ ಹುಟ್ಟಿಕೊಂಡಿದ್ದು ಗುಟ್ಟೇನಲ್ಲ. ನಾಲ್ಕು ತಿಂಗಳ ಬಿಡುವಿನ ಬಳಿಕ ಅವರು ಪ್ರೀತಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಹೌದು. ಧನ್‌ವೀರ್‌ ಅವರ ಎರಡನೇ ಚಿತ್ರ ನವಿರು ಪ್ರೇಮದ ಕಥಾಹಂದರ ಹೊಂದಿದೆಯಂತೆ. ಚೇತನ್‌ಕುಮಾರ್‌ ಅವರು ಈ ಸಿನಿಮಾದ ಕಥೆ, ಚಿತ್ರಕಥೆ ಹೊಸೆಯುತ್ತಿದ್ದಾರೆ. ಜೊತೆಗೆ, ಸಂಭಾಷಣೆಯ ಜವಾಬ್ದಾರಿ ಕೂಡ ಅವರದ್ದೇ. ಆದರೆ, ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎನ್ನುವ ಗುಟ್ಟು ಹೇಳಲು ಧನ್‌ವೀರ್‌ ಸುದ್ದಿಗೋಷ್ಠಿಯಲ್ಲಿ ನಿರಾಕರಿಸಿದರು.

ADVERTISEMENT

‘ನನ್ನ ಎರಡನೇ ಚಿತ್ರ ನಿರ್ಮಾಣ ಸಂಬಂಧ ಹಲವು ನಿರ್ದೇಶಕರು, ನಿರ್ಮಾಪಕರು ಮೊಬೈಲ್‌ ಕರೆ ಮಾಡುತ್ತಿದ್ದರು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಕೆಲವರು ಹೊಸ ಹುಡುಗನಿಗೆ ಅಹಂಕಾರ ಬಂದಿದೆ ಎಂದುಕೊಂಡಿರಬಹುದು. ಚಿತ್ರದ ಯಾವುದೇ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿಲ್ಲ. ನನ್ನದು ಕೇವಲ ನಟನೆಯಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಧನ್‌ವೀರ್‌ ಅವರ ಎರಡನೇ ಚಿತ್ರಕ್ಕೆ ನಾನೇ ಬಂಡವಾಳ ಹೂಡುತ್ತೇನೆ. ಈಗಾಗಲೇ, ತಂತ್ರಜ್ಞರ ತಂಡ ಅಂತಿಮಗೊಂಡಿದೆ. ಚೇತನ್‌ಕುಮಾರ್‌, ಮಹೇಶ್‌ಕುಮಾರ್‌ ಅವರು ಈ ಚಿತ್ರ ನಿರ್ದೇಶಿಸುತ್ತಿಲ್ಲ. ಶೀಘ್ರವೇ ನಿರ್ದೇಶಕರ ಹೆಸರನ್ನು ಪ್ರಕಟಿಸುತ್ತೇವೆ. ಕನ್ನಡದ ಹುಡುಗಿಯೇ ಈ ಚಿತ್ರದ ನಾಯಕಿ’ ಎಂದರು ‘ಭರಾಟೆ’ ಚಿತ್ರದ ನಿರ್ಮಾಪಕ ಸುಪ್ರೀತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.