ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆಗಾಗಿ ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ, ಕಾಂಗ್ರೆಸ್ ಮುಖಂಡರೊಬ್ಬರ ಮಗ ಆರ್.ವಿ. ಯುವರಾಜ್ ಹಾಗೂ 'ನೂರು ಜನ್ಮಕು' ಸಿನಿಮಾ ನಟ ಸಂತೋಷ್ ಕುಮಾರ್ ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆಯೇ ಹಾಜರಾಗಿದ್ದಾರೆ.
ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿವೆ. ಅದನ್ನು ಆಧರಿಸಿ ಮೂವರಿಗೂ ನೋಟಿಸ್ ನೀಡಲಾಗಿತ್ತು. ಶನಿವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು.
ಅದರಂತೆ ಮೂವರು ಕಚೇರಿಗೆ ಬಂದಿದ್ದಾರೆ. ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಗೆ ಹೋಗುವ ಮುನ್ನ ಮಾತನಾಡಿದ ಅಕುಲ್ ಬಾಲಾಜಿ, 'ಸಿಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಅವರ ಎಲ್ಲ ಪ್ರಶ್ನೆಗೂ ನಾನು ಉತ್ತರಿಸುತ್ತೇನೆ. ಬಂಧಿತ ಆರೋಪಿ ವೈಭವ್ ಜೈನ್ ಜೊತೆ ಹಾಯ್ ಬಾಯ್ ಸ್ನೇಹ ಅಷ್ಟೇ. ಬೇರೆ ಏನು ಇಲ್ಲ' ಎಂದರು.
'ತಪ್ಪು ಮಾಡಿರದಿದ್ದರೆ ಹೆದರಬೇಡ ಎಂದು ತಾಯಿ ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಸಿಸಿಬಿ ನನ್ನನ್ನು ಏಕೆ ಕರೆಸಿದೆ ಎಂದು ಗೊತ್ತಿಲ್ಲ. ವಿಚಾರಣೆ ಎದುರಿಸಿದ ಮೇಲೆಯೇ ತಿಳಿಯಲಿದೆ' ಎಂದೂ ಹೇಳಿದರು.
ನಟ ಸಂತೋಷ್ ಕುಮಾರ್, 'ಮೊದಲು ವಿಚಾರಣೆ ಎದುರಿಸುವೆ. ಆ ಮೇಲೆ ಮಾಧ್ಯಮದ ಮುಂದೆ ಮಾತನಾಡುವೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.