ADVERTISEMENT

ತಲ್ವಾರ್‌ನಲ್ಲಿ ಕೇಕ್ ಕತ್ತರಿಸಿದ ಪ್ರಕರಣ: ನನ್ನಿಂದ ತಪ್ಪಾಗಿದೆ ಎಂದ ವಿಜಯ್‌ 

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:41 IST
Last Updated 21 ಜನವರಿ 2020, 9:41 IST
   

ಬೆಂಗಳೂರು: ಜನ್ಮದಿನ ಆಚರಣೆ ವೇಳೆ ಕತ್ತಿಯಲ್ಲಿ (ತಲ್ವಾರ್) ಕೇಕ್ ಕತ್ತರಿಸಿ ವಿವಾದಕ್ಕೆ ಕಾರಣರಾಗಿದ್ದ ನಟ ದುನಿಯಾ ವಿಜಯ್ ಮಂಗಳವಾರ ಗಿರಿನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.

ಸುಮಾರು ಎರಡು ಗಂಟೆ ಪೊಲೀಸರ ಮುಂದೆ ಘಟನೆ ಬಗ್ಗೆ ವಿಜಯ್ ವಿವರಣೆ ನೀಡಿದರು. ನಿಯಮ ಉಲ್ಲಂಘಿಸಿ, ಕತ್ತಿ ಬಳಸಿ ಕೇಕ್ ಕತ್ತರಿಸಿದ ಕಾರಣಕ್ಕೆ ವಿಜಯ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು.

ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್, 'ನನ್ನಿಂದ ತಪ್ಪಾಗಿದೆ, ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೆನೆ. ಪೊಲೀಸರು ಮತ್ತೆ ವಿಚಾರಣೆಗೆ ಕರೆದಿದ್ದು ಹಾಜರಾಗುತ್ತೇನೆ ಎಂದು ಹೇಳಿದರು.

'ಹುಟ್ಟು ಹಬ್ಬದ ಆಚರಣೆ ವೇಳೆ ಅಕ್ಕಪಕ್ಕದವರಿಗೆ ತೊಂದರೆ ಆಗಿದೆ ಎಂದಿದ್ದಾರೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವೆ ಎಂದು ವಿಜಯ್‌ ತಿಳಿಸಿದ್ದಾರೆ.

ಜನ್ಮದಿನ ಆಚರಣೆ ವೇಳೆ ಯಾರೋ ಅಭಿಮಾನಿ ತಲ್ವಾರ್ ಕೊಟ್ಟ, ಆ ತಲ್ವಾರ್‌ನಲ್ಲಿ ಕೇಕ್‌ ಕಟ್ ಮಾಡೋದು ತಪ್ಪು ಎಂದು ನಂಗೆ ಗೊತ್ತಿರಲಿಲ್ಲ, ಅದು ಯಾರು ತಂದು ಕೊಟ್ರು ಅಂತಾ ಕೂಡ ಗೊತ್ತಾಗಲಿಲ್ಲ, ತುಂಬಾ ಜನ ಇದ್ದರು' ಎಂದರು.

'ತಲ್ವಾರ್ ಈಗ ಎಲ್ಲಿದೆ ಅಂತನೂ ಗೊತ್ತಿಲ್ಲ, ಎಲ್ಲಿದೆ ಅಂತ ಹುಡುಕಿ ತಂದು ಕೊಡುವೆ ಹಾಗೂ ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನೂ ಪೊಲೀಸರಿಗೆ ತಂದು ಕೊಡುತ್ತೇನೆ' ಎಂದೂ ವಿಜಯ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.