ADVERTISEMENT

ನಿರ್ದೇಶಕರ ಸಂಘದಿಂದ ಪ್ರಶಸ್ತಿ, ಸನ್ಮಾನ: ಎನ್‌.ಆರ್‌. ನಂಜುಂಡೇಗೌಡ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 10:45 IST
Last Updated 15 ನವೆಂಬರ್ 2022, 10:45 IST
ನಿರ್ದೇಶಕರ ಸಂಘದ ಪದಾಧಿಕಾರಿಗಳು
ನಿರ್ದೇಶಕರ ಸಂಘದ ಪದಾಧಿಕಾರಿಗಳು   

ಬೆಂಗಳೂರು: ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ವತಿಯಿಂದ ಹಿರಿಯ ನಿರ್ದೇಶಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಎನ್‌.ಆರ್‌. ನಂಜುಂಡೇಗೌಡ ಹೇಳಿದರು.

ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ)ಗೆ ಒಂದು ದೊಡ್ಡ ಪರಂಪರೆಯಿದೆ. ಪುಟ್ಟಣ್ಣ ಕಣಗಾಲ್, ರಾಜೇಂದ್ರಸಿಂಗ್ ಬಾಬು ಅಂಥವರು ಕಟ್ಟಿ ಬೆಳೆಸಿದ 4 ದಶಕಗಳ ಇತಿಹಾಸವಿರುವ ಈ ಸಂಘ ಪ್ರತಿಷ್ಠಿತ ಕಾನ್ಫಿಡಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಂಡು ಬಂದಿತ್ತು. ಆದರೆ ಈ ನಡುವೆ ಕಾರಣಾಂತರಗಳಿಂದ ಅದು ನಿಂತುಹೋಗಿತ್ತು. ಈಗ ನನ್ನ ಜೊತೆಗಿರುವ ತಂಡ ಶಕ್ತಿಯುತವಾಗಿದೆ.ಅದನ್ನು ಮತ್ತೆ ಮುಂದುವರಿಸಿಕೊಂಡು ಹೋಗುತ್ತೇವೆ. ಅಲ್ಲದೆ ಇದೇ ತಿಂಗಳ 30ರಂದು ಕಳೆದ 4 ದಶಕಗಳಿಗೂ ಮೇಲ್ಪಟ್ಟು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಿರ್ದೇಶಕರನ್ನು ಗೌರವಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸಾಕಷ್ಟು ಜನ ಕಲಾವಿದರು, ನಿರ್ಮಾಪಕರು ಕೈ ಜೋಡಿಸುತ್ತಿದ್ದಾರೆ. ಅದೇ ಧೈರ್ಯದ ಮೇಲೆ ನಾವು ಈ ಸಾಹಸ ಮಾಡುತ್ತಿದ್ದೇವೆ. ಸದ್ಯ ಸಂಘದ ತಾತ್ಕಾಲಿಕ ಕಚೇರಿಯನ್ನು ಶೇಷಾದ್ರಿಪುರಂನಲ್ಲಿ ತೆರೆದಿದ್ದೇವೆ. ಅಲ್ಲದೆ ಸಂಘಕ್ಕೆ ಹೊಸದಾಗಿ ಸದಸ್ಯರನ್ನು ಸೇರಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಎಂ.ಜಿ. ರಾಮಮೂರ್ತಿ, ನಾಗೇಂದ್ರ ಅರಸ್, ಎನ್‌.ಆರ್‌.ಕೆ. ವಿಶ್ವನಾಥ್, ಮಂಜು ಮಸ್ಕಲ್‌ಮಟ್, ಕಾರಂಜಿ ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.