ADVERTISEMENT

'ಯುವರತ್ನ' ನೋಡಲು ನೂಕು ನುಗ್ಗಲು: ಪೊಲೀಸರಿಂದ ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 5:24 IST
Last Updated 1 ಏಪ್ರಿಲ್ 2021, 5:24 IST
   

ಹೊಸಪೇಟೆ (ವಿಜಯನಗರ):ನಟ ಪುನೀತ್ ರಾಜಕುಮಾರ ಅಭಿನಯದ 'ಯುವರತ್ನ' ಚಿತ್ರಕ್ಕೆ ನಗರದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ.

ನಗರದ ನಾಲ್ಕೂ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಂಡಿದ್ದು ವಿಶೇಷ. ಬೆಳಗಿನ ಜಾವ 5 ಗಂಟೆಗೆ ಮೀರ್ ಆಲಂ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಸಮಯ ನಿಗದಿಗೊಂಡಿತು.

ಬಾಲಾ ಚಿತ್ರಮಂದಿರದಲ್ಲಿ ಆರು ಗಂಟೆಗೆ, ಸರಸ್ವತಿ ಮತ್ತು ಲಕ್ಷ್ಮಿ ಚಿತ್ರಮಂದಿರದಲ್ಲಿ ಏಳು ಗಂಟೆಗೆ ಮೊದಲ ಷೋ ಪ್ರದರ್ಶನ ಕಂಡಿತು.

ADVERTISEMENT

ಚಿತ್ರ ವೀಕ್ಷಣೆಗೆ ಪುನೀತ್ ಅವರ ಅಭಿಮಾನಿಗಳು ತಡರಾತ್ರಿ 1 ಗಂಟೆಯಿಂದಲೇ ಚಿತ್ರಮಂದಿರದ ಎದುರು ಜಮಾಯಿಸಿದ್ದರು. ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಪುನೀತ್ ಕಟೌಟ್ ಗೆ ಮಾಲೆ ಹಾಕಿ ಜಯಘೋಷ ಹಾಕಿ ಅಲ್ಲಿಯೇ ಕಾದು ಕುಳಿತರು. ಐದು ಗಂಟೆಗೆ ಜನದಟ್ಟಣೆ ಹೆಚ್ಚಾಯಿತು. ಬಾಲಾ ಚಿತ್ರಮಂದಿರದ ಗೇಟ್ ತೆರೆಯುತ್ತಿದ್ದಂತೆ ಎಲ್ಲರೂ ಟಿಕೆಟ್ ಕೌಂಟರ್ ನಲ್ಲಿ ಮುಗಿಬಿದ್ದದ್ದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಪುನೀತ್ ಅವರ ಕೆಲ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಬಂದಿದ್ದ ಜನರಿಗೆ ಉಪಾಹಾರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.