ಸಾಲು, ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶಿವರಾಜ್ಕುಮಾರ್ ಇದೀಗ ನಿರ್ದೇಶಕ ದಿನಕರ್ ತೂಗುದೀಪ ಜೊತೆ ಕೈಜೋಡಿಸಿದ್ದಾರೆ. ಶಿವರಾಜ್ಕುಮಾರ್ ಅವರ 131ನೇ ಚಿತ್ರವನ್ನು ದಿನಕರ್ ನಿರ್ದೇಶಿಸಲಿದ್ದಾರೆ. ಪ್ರಿಯದರ್ಶಿನಿ ರಾಮರೆಡ್ಡಿ ಬರೆದಿರುವ ಕಥೆಗೆ ‘ಬಿಂದ್ಯಾ ಮೂವೀಸ್’ ಬಂಡವಾಳ ಹೂಡುತ್ತಿದೆ.
2023ರಲ್ಲಿ ‘ಜೈಲರ್’, ‘ಘೋಸ್ಟ್’ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಶಿವರಾಜ್ಕುಮಾರ್ ಸದ್ಯ ‘ಭೈರತಿ ರಣಗಲ್’ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಅವರ ಅಭಿನಯದ ‘ಕರಟಕ ದಮನಕ’ ಚಿತ್ರೀಕರಣ ಮುಗಿದಿದೆ. ಪುತ್ರಿ ನಿವೇದಿತಾ ನಿರ್ಮಿಸುತ್ತಿರುವ ‘ಫೈರ್ ಫ್ಲೈ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ಸೆಂಚುರಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸ ಆರಂಭಿಸಿರುವ ಚಿತ್ರತಂಡ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಸುತ್ತಿದೆ. ಮಹಾಶಿವರಾತ್ರಿ ಹಬ್ಬದ ವೇಳೆಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.
ಈ ಹಿಂದೆ ‘ಜೊತೆ ಜೊತೆಯಲಿ’, ‘ನವಗ್ರಹ’, ‘ಸಾರಥಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ದಿನಕರ್ ಅವರ ‘ರಾಯಲ್’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಆ್ಯಕ್ಷನ್, ಮಾಸ್ ಕಥೆ ಹೊಂದಿರುವ ಈ ಹೊಸ ಚಿತ್ರದ ಕೆಲಸಗಳು ಪ್ರಾರಂಭಗೊಂಡಿವೆ. ಶಿವಣ್ಣ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳು ಮುಗಿದ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಜನೆಯಿದೆ’ ಎಂದು ಚಿತ್ರತಂಡ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.