ADVERTISEMENT

ಸುವರ್ಣಾವಕಾಶ ಕಲ್ಪಿಸಲು ರಿಷಿ ಸಜ್ಜು

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 7:11 IST
Last Updated 5 ಜೂನ್ 2019, 7:11 IST
ರಿಷಿ ಮತ್ತು ಧನ್ಯಾ ಬಾಲಕೃಷ್ಣ
ರಿಷಿ ಮತ್ತು ಧನ್ಯಾ ಬಾಲಕೃಷ್ಣ   

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು ನಟ ರಿಷಿ. ಅವರು ನಟಿಸಿದ ಎರಡನೇ ಚಿತ್ರ ‘ಕವಲುದಾರಿ’ಯೂ ಪ್ರೇಕ್ಷಕರ ಮನಗೆದ್ದಿದೆ. ಈ ನಡುವೆ ರಿಷಿ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಕಲ್ಪಿಸಲು ರೆಡಿಯಾಗಿದ್ದಾರೆ. ಅದು ಏನು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಇದು ಆಧುನಿಕ ಯುಗ. ಪ್ರತಿಯೊಬ್ಬರು ಒಂದೊಂದು ವಸ್ತುವಿನ ಮೇಲೆ ಆಸೆಪಡುವುದು ಸಹಜ. ಇದರ ಸುತ್ತವೇ ಈ ಚಿತ್ರದ ಕಥೆ ಸಾಗಲಿದೆಯಂತೆ. ಚಿತ್ರ ನಾಯಕ ತನ್ನ ಪ್ರೇಯಸಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾನೆ. ಆಗ ಆತ ಒಂದು ಘಟನೆಯಲ್ಲಿ ಸಿಲುಕುತ್ತಾನೆ. ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾನೆ ಎನ್ನುವುದೇ ಈ ಚಿತ್ರದ ತಿರುಳು.

ಈ ಚಿತ್ರದಲ್ಲಿ ರಿಷಿಗೆ ಧನ್ಯಾ ಬಾಲಕೃಷ್ಣ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಮಾತಿನ ಮರುಲೇಪನ ಕಾರ್ಯ ಬಾಲಾಜಿ ಸ್ಟುಡಿಯೊದಲ್ಲಿ ಮುಕ್ತಾಯವಾಯಿತು. ಇನ್ನು ಮೂರು ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆಯಂತೆ. ಇದೇ ತಿಂಗಳಿನಲ್ಲಿ ಶೂಟಿಂಗ್‌ ಮುಗಿಯಲಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಅನೂಪ್ ರಾಮಸ್ವಾಮಿ ಕಶ್ಯಪ್ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ ಬರೆದಿದ್ದಾರೆ.ಛಾಯಾಗ್ರಹಣ ವಿಜ್ಞೇಶ್‌ ರಾಜ್ ಅವರದ್ದು.

ಐದು ಹಾಡುಗಳಿಗೆ ಮಿಧುನ್‌ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಆರ್. ದೇವರಾಜ್‌, ಪ್ರಶಾಂತ್‌ ರೆಡ್ಡಿ, ಜನಾರ್ದನ್‌ ಚಿಕ್ಕಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಶೀನು, ಮಿತ್ರ, ಶಾಲಿನಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.