ADVERTISEMENT

ಜನವರಿಯಿಂದ ‘ಬೈರತಿ ರಣಗಲ್ಲು’ ಚಿತ್ರದ ಶೂಟಿಂಗ್ ಶುರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 14:41 IST
Last Updated 25 ಸೆಪ್ಟೆಂಬರ್ 2019, 14:41 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಎರಡು ವರ್ಷದ ಹಿಂದೆ ತೆರೆಕಂಡ ‘ಮಫ್ತಿ’ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಚಿತ್ರ. ‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ಮತ್ತು ‘ರೋರಿಂಗ್‌ ಸ್ಟಾರ್‌’ ಶ್ರೀಮುರಳಿ ಜೊತೆಯಾಗಿ ನಟಿಸಿದ್ದ ಈ ಚಿತ್ರಕ್ಕೆ ನರ್ತನ್‌ ಆಕ್ಷನ್‌ ಕಟ್‌ ಹೇಳಿದ್ದರು. ತೆರೆಯ ಮೇಲೆ ಬಿಚ್ಚಿಕೊಳ್ಳುವ ಪೊಲೀಸ್‌ ಹಾಗೂ ಪಾತಕ ಲೋಕದ ನಡುವಿನ ಕಥೆಗೆ ಪ್ರೇಕ್ಷಕರು ಬೆರಗಾಗಿದ್ದರು.

ಇದರಲ್ಲಿ ಶಿವರಾಜ್‌ಕುಮಾರ್‌ ಅವರ ಪಾತ್ರದ ಹೆಸರು ‘ಬೈರತಿ ರಣಗಲ್ಲು’. ಜಿಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆ ವಿರುದ್ಧ ಬೈರತಿಗೆ ಕಡುಕೋಪ. ಆತ ಸತ್ಯಕ್ಕಾಗಿ ಹೋರಾಡುವ ರಾಕ್ಷಸ. ತಪ್ಪು ಮಾಡಿದವರನ್ನು ಆತ ಎಂದಿಗೂ ಕ್ಷಮಿಸುವುದಿಲ್ಲ. ಆತನದು ತಣ್ಣನೆಯ ಕ್ರೌರ್ಯ. ಆದರೆ, ರಾಮಾಯಣ ಓದಿಕೊಂಡಿರುವ ಮೇಧಾವಿ. ಅಕ್ರಮಗಣಿಗಾರಿಕೆ ಹಾಗೂ ಹವಾಲ ದಂಧೆಯಲ್ಲಿ ಬೈರತಿಯದ್ದು ಎತ್ತಿದ ಕೈ. ಮತ್ತೊಂದೆಡೆ ಆತ ಜನಾನುರಾಗಿ. ಬೈರತಿ ರಣಗಲ್ಲು ‍ಪಾತ್ರದಲ್ಲಿನ ಶಿವರಾಜ್‌ಕುಮಾರ್‌ ಅವರ ನಟನೆಗೆ ಜನರು ಫಿದಾ ಆಗಿದ್ದರು.

ಈಗ ಶಿವಣ್ಣ ಅವರೇ ನಾಯಕನಾಗಿ ‘ಬೈರತಿ ರಣಗಲ್ಲು’ ಸಿನಿಮಾ ಮುಂದಿನ ವರ್ಷದ ಜನವರಿಯಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದು ‘ಮಫ್ತಿ’ ಚಿತ್ರದ ಮುಂದುವರಿದ ಭಾಗವಂತೆ. ಅಂದಹಾಗೆ ಇದು ಶಿವರಾಜ್‌ಕುಮಾರ್‌ ಅವರ 125ನೇ ಚಿತ್ರವೂ ಹೌದು.

ADVERTISEMENT

ಬೈರತಿ ರಣಗಲ್ಲು ಯಾರು, ಆತನ ಹಿನ್ನೆಲೆ ಏನು ಎನ್ನುವುದರ ಸುತ್ತ ಕಥೆ ಸಾಗಲಿದೆ. ಶ್ರೀಮುರಳಿ ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನರ್ತನ್‌ ಅವರೇ ಈ ಚಿತ್ರ ನಿರ್ದೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.