ವರ್ಷದ ಆರಂಭದಲ್ಲಿ ತಮ್ಮ ‘ಆರ್ಸಿ ಸ್ಟುಡಿಯೊಸ್’ನಡಿ ನಿರ್ಮಾಣವಾಗಲಿರುವ ಐದು ಸಿನಿಮಾಗಳನ್ನು ಘೋಷಿಸಿದ್ದ ನಿರ್ದೇಶಕ ಆರ್. ಚಂದ್ರು, ಇದೀಗ ಸೆಂಚುರಿ ಸ್ಟಾರ್ ಜೊತೆಗೆ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಂದ್ರು, ‘ಕನ್ನಡದ ಸೂಪರ್ಹಿಟ್ ಚಿತ್ರ ‘ಮೈಲಾರಿ’ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ’ ಎಂದಿದ್ದಾರೆ. ಇದು ‘ಆರ್ಸಿ ಸ್ಟುಡಿಯೊಸ್’ನ ಆರನೇ ಪ್ರಾಜೆಕ್ಟ್ ಆಗಿರಲಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿಲ್ಲ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲಿ ಐದು ಸಿನಿಮಾಗಳ ನಿರ್ಮಾಣವನ್ನು ನಿರ್ಮಾಣ ಸಂಸ್ಥೆಯೊಂದು ಘೋಷಿಸಿತ್ತು. ‘ಕಬ್ಜ–2’, ‘ಡಾಗ್’, ‘ಫಾದರ್’, ‘ಪಿ.ಒ.ಕೆ’, ‘ಶ್ರೀ ರಾಮ ಬಾಣ ಚರಿತ’ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಕಳೆದ ಜನವರಿಯಲ್ಲಿ ಚಂದ್ರು ಘೋಷಿಸಿದ್ದರು. ಇದರಲ್ಲಿ ‘ಕಬ್ಜ–2’ ಮತ್ತು ‘ಪಿ.ಒ.ಕೆ’ ಸಿನಿಮಾಗಳನ್ನು ನಿರ್ದೇಶಿಸುತ್ತಿರುವುದಾಗಿ ಚಂದ್ರು ಹೇಳಿದ್ದರು. ಉಳಿದೆಲ್ಲ ಸಿನಿಮಾಗಳನ್ನು ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.