ಪಿಆರ್ಕೆ ಪ್ರೊಡಕ್ಷನ್ಸ್ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್. ಅವರ ಜೊತೆಗೂಡಿ ನಟ ದಿವಂಗತ ಪುನೀತ್ ರಾಜ್ಕುಮಾರ್ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ಯ ಟೀಸರ್ ಬಿಡುಗಡೆಯಾಗಿದ್ದು, ‘ಇದನ್ನು ನೋಡಿ ಒಂದು ಕ್ಷಣ ಶಾಕ್ ಆಯಿತು, ಬೇಸರವೂ ಆಯಿತು’ ಎಂದಿದ್ದಾರೆ ನಟ ಶಿವರಾಜ್ಕುಮಾರ್.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಒಂದು ಕ್ಷಣ ಶಾಕ್ ಆಯಿತು. ಬೇಸರವೂ ಆಯಿತು. ಇಂಥ ಚಿತ್ರವನ್ನು ತೆಗೆದ ಮನುಷ್ಯನೇ ಇಲ್ಲವೆಂದಾಗ ಬೇಜಾರಾಗುತ್ತಿದೆ. ಅಪ್ಪುವಿನ ಆ ಲುಕ್, ಆ ನಗು ಬಹಳ ಕಾಡುತ್ತದೆ. ಬಹಳ ನೋವಾಗುತ್ತದೆ. ಈ ಪ್ರಯತ್ನಕ್ಕೆ ಸರಿಸಾಟಿಯಿಲ್ಲ. ಗಂಧದಗುಡಿ ಎಂದರೆ ಕರುನಾಡು. ಕನ್ನಡದ ಸ್ವತ್ತು. ಗಂಧದಗುಡಿ ಮೊದಲ ಭಾಗದಲ್ಲಿ ಅಪ್ಪಾಜಿ, ಎರಡನೇ ಭಾಗದಲ್ಲಿ ನಾನು ಹಾಗೂ ಅಪ್ಪಾಜಿ, ಈಗ ಗಂಧದಗುಡಿಯಲ್ಲಿ ಅಪ್ಪು. ಹೀಗೆ ಗಂಧದಗುಡಿಗೂ ನಮ್ಮ ಕುಟುಂಬಕ್ಕೂ ಸಂಬಂಧವಿದೆ. ಇದು ಹೆಮ್ಮೆ ಎನಿಸುತ್ತದೆ. ಆದರೆ ಅಪ್ಪು ಇಲ್ಲ ಎನ್ನುವುದು ದುಃಖದ ವಿಷಯ. ಆದರೆ ನಾವು ಎಂದೂ ಅಪ್ಪು ಇಲ್ಲ ಎಂದುಕೊಂಡಿಲ್ಲ’ ಎಂದರು.
‘ಪ್ರಸ್ತುತ ಸಂದರ್ಭದಲ್ಲಿ ಇಂಥ ವಿಚಾರವನ್ನು ಇಟ್ಟುಕೊಂಡು ಇದನ್ನು ನಿರ್ಮಾಣ ಮಾಡಿರುವುದು ಅರ್ಥಪೂರ್ಣ. ಕಾಡು ಹಾಗೂ ವನ್ಯಲೋಕದ ಮಹತ್ವವನ್ನು ಇದರಲ್ಲಿ ಸಾರಿ ಹೇಳಲಾಗಿದೆ. ಪ್ರಸ್ತುತ ಆಗುತ್ತಿರುವ ಅಕಾಲಿಕ ಮಳೆ, ಭೂಕುಸಿತ ಎಲ್ಲವೂ ಕಾಡಿನ ನಾಶದ ಪರಿಣಾಮ’ ಎಂದರು ಶಿವರಾಜ್ಕುಮಾರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.