ರಸ್ತೆಯಲ್ಲಿ ಹೋಗುವ ಹುಡುಗಿಯರ ಮೇಲೆ ಶೋಕಿವಾಲನಿಗೆ ಕಡುಮೋಹ. ಆದರೆ, ಮನದಲ್ಲಿ ಪ್ರೀತಿಸಿ ಮದುವೆಯಾಗಬೇಕು ಎಂಬ ಆಸೆ. ಕೊನೆಗೆ, ಈತ ಹೇಗೆ ಮದುವೆಯಾಗುತ್ತಾನೆ ಎನ್ನುವುದೇ ‘ಶೋಕಿವಾಲ’ ಚಿತ್ರದ ಕಥಾಹಂದರ.
ಕೃಷ್ಣನ ಹೆಸರಿನ ಸರಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕೃಷ್ಣವೇಷಧಾರಿಯಾಗಿದ್ದ ನಟ ಕೃಷ್ಣ ಅಜೇಯ್ ರಾವ್ ಈ ಚಿತ್ರದ ನಾಯಕ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಜಾಕಿ. ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೂ ಇಳಿದಿದ್ದಾರೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಡಿ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿರುವ ಇದರ ಶೂಟಿಂಗ್ ಇತ್ತೀಚೆಗೆ ಮುಕ್ತಾಯವಾಯಿತು. ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ತುಮಕೂರು, ಮಾಗಡಿ, ಮದ್ದೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮದ್ದೂರಿನ ಬಳಿಯ ತೈಲೂರಿನಲ್ಲಿ ಕೊನೆಯ ದಿನದ ಚಿತ್ರೀಕರಣ ನಡೆಸಿದ ಚಿತ್ರತಂಡ ಅಲ್ಲಿಯೇ ಕುಂಬಳಕಾಯಿ ಒಡೆದಿದೆ. ಚಿತ್ರದ ಡಬ್ಬಿಂಗ್ ಕೂಡ ಮುಕ್ತಾಯ ಹಂತದಲ್ಲಿದೆಯಂತೆ.
ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್ಫೀರ್ ಹಾಡುಗಳನ್ನು ಬರೆದಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ವಿಕ್ರಂ ಮೋರ್ ಸಾಹಸ ಸಂಯೋಜಿಸಿದ್ದಾರೆ. ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.
ಸಂಜನಾ ಆನಂದ್ ಇದರ ನಾಯಕಿ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣಾ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯಾ, ವಾಣಿ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ:‘ಶೋಕಿವಾಲ’ನ ಸಾಹಸ ಯಾತ್ರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.