ADVERTISEMENT

ಶ್ರುತಿ ಪ್ರಕರಣಕ್ಕೂ ಸಿನಿಮಾಗೂ ಸಂಬಂಧವಿಲ್ಲ: ಲಿಂಗದೇವರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 10:18 IST
Last Updated 29 ಅಕ್ಟೋಬರ್ 2018, 10:18 IST
ಶ್ರುತಿ ಹರಿಹರನ್
ಶ್ರುತಿ ಹರಿಹರನ್   

ಬೆಂಗಳೂರು:ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಶೋಷಣೆಯ ಆಪಾದನೆ ಹೊರಿಸಿರುವ ಕಾರಣಕ್ಕೆ ಶ್ರುತಿ ಅವರನ್ನು ಬಿ.ಎಸ್‌. ಲಿಂಗದೇವರು ಅವರ ‘ದಾರಿ ತಪ್ಪಿಸು ದೇವರೇ’ ಚಿತ್ರದಿಂದ ಕೈಬಿಡಲಾಗಿದೆಯೇ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಕಳೆದ ಎರಡು ದಿನಗಳಿಂದ ಚರ್ಚಿತವಾಗುತ್ತಿದೆ. ಈ ಕುರಿತಂತೆ ಪ್ರಜಾವಾಣಿ ಜತೆ ಮಾತನಾಡಿರುವ ಲಿಂಗದೇವರು ‘ನನ್ನ ಸಿನಿಮಾದಲ್ಲಿ ಶ್ರುತಿ ನಟಿಸುವುದು ಖಚಿತವಿಲ್ಲ. ಆದರೆ ‘ಮೀ ಟೂ’ ಅಭಿಯಾನಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನನ್ನ ಸಿನಿಮಾದಲ್ಲಿ ನಟಿಸಲು ಶ್ರುತಿ ಹರಿಹರನ್ ಒಪ್ಪಿಕೊಂಡಿದ್ದರು. ಆದರೆ ಜನವರಿ ಮೂರರಿಂದ ಅವರು ಎಲ್ಲಿಗೋ ಹೋಗುತ್ತಿದ್ದಾರೆ. ಎರಡು ತಿಂಗಳು ಲಭ್ಯ ಇರುವುದಿಲ್ಲ. ಹಾಗಾಗಿ ಅದರ ಒಳಗೇ ಚಿತ್ರೀಕರಣ ಮುಗಿಸಿಕೊಳ್ಳಲು ನಾವು ಯೋಜನೆ ಹಾಕಿಕೊಂಡಿದ್ದೆವು. ನಾನು ಮೂವತ್ತು ದಿನ ಅವರ ಡೇಟ್ಸ್ ಕೇಳಿದ್ದೆ. ಆದರೆ ಈಗ ಜನವರಿ ಮೂರರ ಒಳಗೆ ಚಿತ್ರೀಕರಣ ಮುಗಿಸಲು ಸಾಧ್ಯವಾಗುತ್ತದೆಯೇ ಎಂಬ ಕುರಿತು ನಮ್ಮ ತಂಡದಲ್ಲಿ ಚರ್ಚಿಸುತ್ತಿದ್ದೇವೆ’ ಎಂದು ಅವರು ವಿವರಣೆ ನೀಡಿದರು.

ಈ ಕುರಿತಂತೆ ಶ್ರುತಿ ಅವರೊಂದಿಗೆ ಈಗಾಗಲೇ ಮಾತನಾಡಿರುವುದಾಗಿಯೂ ಅವರು ಹೇಳಿದರು.‘ನಾನು ಈಗ ಕೋರ್ಟ್‌ ಕಚೇರಿ ಪೊಲೀಸ್ ಸ್ಟೇಷನ್‌ಗಳಿಗೆ ಓಡಾಡಲೇ ಬೇಕಾಗುತ್ತದೆ. ಇದರಿಂದ ಚಿತ್ರೀಕರಣಕ್ಕೆ ತೊಂದರೆ ಆಗಬಹುದು. ಹಾಗಾಗಿ ನಾನು ಈ ಚಿತ್ರದಲ್ಲಿ ನಟಿಸಬೇಕೇ ಎನ್ನುವ ಬಗ್ಗೆ ಇನ್ನೊಮ್ಮೆ ಯೋಚಿಸಿ’ ಎಂದು ಶ್ರುತಿ ಅವರೇ ಸಲಹೆ ನೀಡಿದ್ದಾರಂತೆ.

ADVERTISEMENT

‘ಸಿನಿಮಾದ ಚಿತ್ರಕಥೆಯೂ ಇನ್ನೂ ಸರಿಯಾಗಿ ಪೂರ್ತಿಗೊಂಡಿಲ್ಲ. ಸ್ಕ್ರಿಪ್ಟ್ ಸರಿಯಾಗಿ ಸಿದ್ಧವಾಗದೆ ನಾನು ಚಿತ್ರೀಕರಣ ಆರಂಭಿಸುವುದಿಲ್ಲ. ಈ ಎಲ್ಲ ಕಾರಣಗಳಿಂದ ಶ್ರುತಿ ಅವರನ್ನೇ ನಾಯಕಿಯನ್ನಾಗಿ ಇರಿಸಿಕೊಳ್ಳಬೇಕೇ ಬೇಡವೇ ಎಂಬ ಕುರಿತು ತಂಡದ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದ ಅವರು ‘ಶ್ರುತಿ ಆಯ್ಕೆಗೂ ಮೀ ಟೂ ಅಭಿಯಾನಕ್ಕೂ ಯಾವ ರೀತಿಯ ಸಂಬಂಧವೂ ಇಲ್ಲ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.