ರಾಗಿಣಿ ದ್ವಿವೇದಿ ಹಾಗೂ ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಹೊಸ ಸಿನಿಮಾ ‘ಸಿಂಧೂರಿ’ಯ ಮುಹೂರ್ತ ಇತ್ತೀಚೆಗೆ ನಡೆಯಿತು.
ಈ ಚಿತ್ರಕ್ಕೆ ಶಂಕರ್ ಕೋನಮಾನಹಳ್ಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಎಸ್ ರಮೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ್, ‘ನಿರ್ದೇಶಕನಾಗಿ ಇದು ನನಗೆ ನಾಲ್ಕನೇ ಚಿತ್ರ. ಮೇ 10ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಕಲೇಶಪುರ ಸೇರಿದಂತೆ ಹಲವೆಡೆ 45 ದಿನಗಳಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಶೀರ್ಷಿಕೆಗೂ ಯಾವುದೇ ವ್ಯಕ್ತಿಗೂ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಮರ್ಡರ್ ಮಿಸ್ಟ್ರಿ ಜಾನರ್ನಲ್ಲಿ ಈ ಸಿನಿಮಾವಿದ್ದು, ಇಲ್ಲಿ ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಜೋಡಿಯಾಗಿ ನಟಿಸುತ್ತಿಲ್ಲ. ಕಥೆಗೆ ತಿರುವು ನೀಡುವ ಪಾತ್ರವಾಗಿ ಅವರ ಪ್ರವೇಶವಾಗುತ್ತದೆ. ಧರ್ಮ ಅವರ ಪಾತ್ರವೂ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿದೆ’ ಎಂದರು.
‘ಮಹಿಳಾ ಪ್ರಧಾನ ಚಿತ್ರ ಮಾಡುವುದು ಸವಾಲಿನ ಕೆಲಸ. ಒಂದು ವಿಭಿನ್ನ ಕಥೆಗಾಗಿ ಎಲ್ಲರೂ ಹುಡುಕಾಟದಲ್ಲಿದ್ದಾರೆ. ಈ ಚಿತ್ರದ ಕಥೆ ಅಸಾಧಾರಣವಾಗಿದೆ ಎಂದಲ್ಲ, ವಿಭಿನ್ನವಾಗಿದೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಮಹತ್ವವಿದ್ದು, ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾ ಅಂಶಗಳು ಇವೆ. ಇದೊಂದು ಆ್ಯಕ್ಷನ್ ಕಮರ್ಷಿಯಲ್ ಚಿತ್ರವಾಗಲಿದೆ’ ಎಂದರು ರಾಗಿಣಿ.
ಚಿತ್ರಕ್ಕೆ ರಾಕೇಶ್ ಸಿ.ತಿಲಕ್ ಛಾಯಾಚಿತ್ರಗ್ರಹಣ, ಹಿತನ್ ಹಾಸನ್ ಸಂಗೀತ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.