‘ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ನಿನ್ನೆಗಿಂತಲೂ ಇಂದು ವೈದ್ಯರ ಚಿಕಿತ್ಸೆಗೆ ಅಪ್ಪ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಎಸ್ಪಿಬಿ ಅವರ ಪುತ್ರ ಎಸ್.ಪಿ. ಚರಣ್ ವಿಡಿಯೊ ಸಂದೇಶದ ಮೂಲಕ ತಿಳಿಸಿದ್ದಾರೆ.
‘ಕೋವಿಡ್–19 ಸೋಂಕಿಗೆ ತುತ್ತಾಗಿ ಅಪ್ಪ ಚೆನ್ನೈನ ಎಂಜಿಎಂ ಹೆಲ್ತ್ಕೇರ್ಗೆ ದಾಖಲಾದ ದಿನದಿಂದಲೂ ಅವರ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆಯು ಫಲ ನೀಡಲಿದೆ. ಎಂಜಿಎಂ ಹೆಲ್ತ್ಕೇರ್ನ ವೈದ್ಯರು ಅಪ್ಪನ ಚೇತರಿಕೆಗಾಗಿ ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಅಭಿಮಾನಿಗಳು ನಮ್ಮ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಅಪ್ಪ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ. ಎಲ್ಲರೂ ಹೀಗೆಯೇ ಪ್ರಾರ್ಥನೆಯನ್ನು ಮುಂದುವರಿಸಿ. ಕೆಲವರು ತಮಿಳಿನಲ್ಲಿ ಅಪ್ಪನ ಆರೋಗ್ಯ ಕುರಿತು ಮಾಹಿತಿ ನೀಡುವಂತೆ ಕೋರುತ್ತಿದ್ದಾರೆ. ಆದರೆ ಅಪ್ಪ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳದ ಹಲವು ಸಿನಿಮಾಗಳಿಗೆ ಹಾಡಿದ್ದಾರೆ. ವಿಶ್ವದಾದ್ಯಂತ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹಾಗಾಗಿ, ಇಂಗ್ಲಿಷ್ನಲ್ಲಿಯೇ ಸಂದೇಶ ನೀಡುತ್ತಿದ್ದೇನೆ. ಇದರ ಅಪಾರ್ಥ ಮಾಡಿಕೊಳ್ಳಬಾರದು’ ಎಂದು ಕೋರಿದ್ದಾರೆ.
ಆಗಸ್ಟ್ 5ರಂದು ಕೋವಿಡ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಹೆಲ್ತ್ಕೇರ್ಗೆ ಎಸ್ಪಿಬಿ ದಾಖಲಾಗಿದ್ದರು. ಇಂದಿಗೂ ಅವರಿಗೆ ಐಸಿಯುನಲ್ಲಿಯೇ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.