ADVERTISEMENT

ಗಾಯಕ ಎಸ್‌ಪಿಬಿಗೆ ಅಳವಡಿಸಿದ್ದ ವೆಂಟಿಲೇಟರ್‌ ತೆಗೆದಿಲ್ಲ: ಪುತ್ರ ಚರಣ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 12:36 IST
Last Updated 18 ಆಗಸ್ಟ್ 2020, 12:36 IST
   

ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್.ಪಿ. ಚರಣ್‌ ವಿಡಿಯೊ ಮೂಲಕ ಮಾಹಿತಿ ನೀಡಿದ್ದು, ‘ಅಪ್ಪನಿಗೆ ಅಳವಡಿಸಿರುವ ವೆಂಟಿಲೇಟರ್‌ ತೆಗೆದಿಲ್ಲ. ಅವರ ಆರೋಗ್ಯ ಸ್ಥಿತಿಯು ನಿನ್ನೆಯಂತೆಯೇ ಇದೆ’ ಎಂದು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಎಸ್‌ಪಿಬಿ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್‌ ಸಾಧನವನ್ನು ತೆಗೆಯಲಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಅವರ ಸಹೋದರಿ ಎಸ್‌.ಪಿ. ಶೈಲಜಾ ವಾಯ್ಸ್‌ ನೋಟ್‌ನಲ್ಲಿ ತಿಳಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಚರಣ್‌ ಅವರು ವಿಡಿಯೊ ಸಂದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಅಪ್ಪನಿಗೆ ಅಳವಡಿಸಿರುವ ವೆಂಟಿಲೇಟರ್‌ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವುದು ಕೇವಲ ವದಂತಿ. ಅದು ಸತ್ಯವಲ್ಲ. ಅವರಿಗೆ ಇನ್ನೂ ವೆಂಟಿಲೇಟರ್‌ ಅಳವಡಿಸಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಅಂತಹ ಸುದಿನ ಶೀಘ್ರ ಬರಲೆಂದು ನಾವೂ ಕಾಯುತ್ತಿದ್ದೇವೆ. ಅಪ್ಪನ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಅವರು ಕೋವಿಡ್‌–19 ವಿರುದ್ಧ ಜಯಸಿ ಮತ್ತೆ ಚೈತನ್ಯದೊಂದಿಗೆ ಮನೆಗೆ ಮರಳಿದ್ದಾರೆ ಎಂದು ವಿಶ್ವಾಸವಿದೆ. ನಮ್ಮ ಕುಟುಂಬದ ಬಗ್ಗೆ ನೀವು ತೋರುತ್ತಿರುವ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

ADVERTISEMENT

ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಎಸ್‌ಪಿಬಿ ಅವರನ್ನು ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಆಗಸ್ಟ್‌ 13ರಂದು ಎಸ್‌ಪಿಬಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಅವರು ಶೀಘ್ರ ಗುಣಗುಖರಾಗಲೆಂದು ನಟರಾದ ರಜನಿಕಾಂತ್‌, ಕಮಲಹಾಸನ್‌, ಧನುಷ್‌, ಮಹೇಶ್‌ ಬಾಬು, ಸಂಗೀತ ನಿರ್ದೇಶಕ ಇಳೆಯರಾಜ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.

ನಿನ್ನೆ ವಿಡಿಯೊ ಬಿಡುಗಡೆ ಮಾಡಿದ್ದ ರಜನಿಕಾಂತ್‌, ‘ಐವತ್ತು ವರ್ಷಗಳ ಕಾಲ ಎಸ್‌ಪಿಬಿ ಹಲವು ಭಾಷೆಯ ಸಿನಿಮಾಗಳಲ್ಲಿ ಹಾಡಿದ್ದಾರೆ. ತಮ್ಮ ಧ್ವನಿಯ ಮೂಲಕ ಕೇಳುಗರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಅವರು ಚೇತರಿಕೆಯ ಹಾದಿಯಲ್ಲಿರುವುದು ನನಗೆ ಖುಷಿ ತಂದಿದೆ. ಅವರು ಶೀಘ್ರ ಗುಣಮುಖರಾಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.