ADVERTISEMENT

Spandana Vijay- ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 13:40 IST
Last Updated 9 ಆಗಸ್ಟ್ 2023, 13:40 IST
   

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬುಧವಾರ ನೆರವೇರಿತು. ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಪತಿ ವಿಜಯ್‌ ರಾಘವೇಂದ್ರ, ಪುತ್ರ ಶೌರ್ಯ ಇಬ್ಬರೂ ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ಸಕಲ ವಿಧಿ ವಿಧಾನಗಳನ್ನು ಪೂರೈಸಿದರು.

ಬ್ಯಾಂಕಾಕ್‌ನಲ್ಲಿ ನಿಧನ ಹೊಂದಿದ್ದ ಸ್ಪಂದನಾ ಪಾರ್ಥಿವ ಶರೀರವನ್ನು ಮಂಗಳವಾರ ತಡರಾತ್ರಿ ಮಲ್ಲೇಶ್ವರದ ಅವರ ತವರು ಮನೆಗೆ ತರಲಾಗಿತ್ತು. ಬುಧವಾರ ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪಂದನಾ ಅವರ ಪತಿ, ನಟ ವಿಜಯ್ ರಾಘವೇಂದ್ರಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು. ಚಿತ್ರ ನಟ ಯಶ್‌, ಶಿವರಾಜ್‌ಕುಮಾರ್‌ ದಂಪತಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅಂತಿಮ ದರ್ಶನದಲ್ಲಿ ಭಾಗಿಯಾದರು.

ADVERTISEMENT

ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೆ ಚಿರಶಾಂತಿ ವಾಹನದಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು. ಸಾವಿರಾರು ಸಾರ್ವಜನಿಕರು ಕೂಡ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಸ್ಪಂದನಾ ತಂದೆ ಬಿ.ಕೆ.ಶಿವರಾಂ, ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್‌, ಮಾವ ಚಿನ್ನೇಗೌಡ ಸೇರಿದಂತೆ ಇಡೀ ಕುಟುಂಬವರ್ಗ ಅಂತ್ಯಸಂಸ್ಕಾರದಲ್ಲಿ ಭಾಗಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.