ADVERTISEMENT

ಇದು ಪ್ರಣಯರಾಜನ ‘ಆರ್ಟ್‌ ಎನ್‌ ಯು‘: ಶ್ರೀನಾಥ್‌ ಸಾರಥ್ಯದಲ್ಲಿ ತರಬೇತಿ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 9:46 IST
Last Updated 23 ಜನವರಿ 2022, 9:46 IST
ಆರ್ಟ್‌ ಎನ್‌ ಯು ಉದ್ಘಾಟನಾ ಸಮಾರಂಭದಲ್ಲಿ ಗೀತಾ, ನಟ ಶ್ರೀನಾಥ್‌, ರೋಹಿತ್‌ ಮತ್ತು ಮಂಗಳಾ
ಆರ್ಟ್‌ ಎನ್‌ ಯು ಉದ್ಘಾಟನಾ ಸಮಾರಂಭದಲ್ಲಿ ಗೀತಾ, ನಟ ಶ್ರೀನಾಥ್‌, ರೋಹಿತ್‌ ಮತ್ತು ಮಂಗಳಾ   

ಪ್ರಣಯರಾಜ ಶ್ರೀನಾಥ್‌ ಅವರ ಸಾರಥ್ಯದಲ್ಲಿ ಬಂದಿದೆ ‘ಆರ್ಟ್‌ ಎನ್‌ ಯು’.ನಟನೆ, ನಿರ್ದೇಶನ, ಕಥೆ ಹಾಗೂ ಬರವಣಿಗೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಬೇತಿ, ಪ್ರಸಾದನ ಹೀಗೆ ಸಿನಿಮಾಗೆ ಸಂಬಂಧಿಸಿದ ತರಬೇತಿ ನೀಡಲಿದೆ ಈ ಸಂಸ್ಥೆ.

‘ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಯಿತು. ನಾನು ಬಂದಾಗಿನ ಚಿತ್ರರಂಗವೇ ಬೇರೆ. ಈಗಲೇ ಬೇರೆ. ಆದರೆ ಕಲಿಕೆ ಮಾತ್ರ ನಿರಂತರ.‌ ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರೇ ಎಂದಿಗೂ ನನ್ನ ಗುರುಗಳು. ಅವರಿಂದ ಕಲಿತದ್ದು ಸಾಕಷ್ಟು. ಆಗಿನ ಕಾಲ, ಈಗಿನ ಕಾಲ ಅನ್ನುವುದಕ್ಕಿಂತ ವರ್ತಮಾನಕ್ಕೆ ನಾವು ಹೊಂದಿಕೊಳ್ಳಬೇಕು. ನಾನು ಈಗಲೂ ಕಲಿಯುತ್ತಿದ್ದೇನೆ. ಈವರೆಗೂ ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸುತ್ತಿದ್ದೇನೆ’ ಎಂದರು ಶ್ರೀನಾಥ್‌.

‘ಫೆಬ್ರುವರಿಯಲ್ಲಿ ಇಲ್ಲಿ ತರಗತಿಗಳು ಆರಂಭವಾಗಲಿವೆ.ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಅವರ ಸಂಸ್ಥೆಯಲ್ಲೇ ರಂಗಮೂಲ ತರಬೇತಿ ನೀಡುವ ಯೋಜನೆಯೂ ಇದೆ’ ಎಂದರು ಶ್ರೀನಾಥ್‌.

ADVERTISEMENT

ಶ್ರೀನಾಥ್ ಪ್ರಯತ್ನಕ್ಕೆ ಅವರ ಪತ್ನಿ ಗೀತಾ, ಮಗ ರೋಹಿತ್ ಹಾಗೂ ಸೊಸೆ ಮಂಗಳಾ ಅವರ ಬೆಂಬಲವಿದೆ.

‘ಇದರ ಜೊತೆಗೆ ‘ಕಾಲ್‌ ಬ್ಯಾಕ್‌’ ಅನ್ನುವ ಕಂಪನಿಯನ್ನೂ ಆರಂಭಿಸಿದ್ದು, ‘ಆರ್ಟ್‌ ಎನ್‌ ಯು’ ಸಂಸ್ಥೆಯಲ್ಲಿ ತರಬೇತಿ ಪಡೆದವರು ಇಲ್ಲಿ ತಮ್ಮ ವಿವರ ದಾಖಲಿಸಬಹುದು. ಹೊಸ ಸಿನಿಮಾ ಆರಂಭಿಸುವವರಿಗೆ ಒಂದೇ ಕಡೆ ಅವರಿಗೆ ಬೇಕಾದ ಕಲಾವಿದರು, ತಂತ್ರಜ್ಞರು ಸಿಗುತ್ತಾರೆ. ಇನ್ನೂ ಆಯಾ ಆಸಕ್ತರನ್ನು ಸಂದರ್ಶಿಸಿ, ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ನಿರ್ಧರಿಸಿ ಶುಲ್ಕ ನಿಗದಿ‌ಪಡಿಸಲಾಗುವುದು ಎಂದು ಶ್ರೀನಾಥ್ ಪುತ್ರ ರೋಹಿತ್ ಮಾಹಿತಿ ನೀಡಿದರು.

ನಟ ಉಪೇಂದ್ರ ಅವರು ಧ್ವನಿ ಸಂದೇಶದ ಮೂಲಕ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.