‘ಈ ಸಿನಿಮಾದ ಹೀರೊ ನಾನಲ್ಲ; ಕಥೆಯೇ ನಾಯಕ’ ಎಂದು ನಟ ಮಯೂರ್ ಪಟೇಲ್ ಹೇಳಲು ಕಾರಣವೂ ಇತ್ತು. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ರೈತರ ಸಮಸ್ಯೆ ಕುರಿತ ಸಿನಿಮಾಗಳು ಬರುತ್ತಿಲ್ಲ ಎನ್ನುವ ಕೊರಗು ಅವರ ಮಾತಿನಲ್ಲಿತ್ತು. ‘ರಾಜೀವ’ ಚಿತ್ರ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ‘ರಾಜೀವ’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಹೊಸ ವರ್ಷದಲ್ಲಿ ಸಿನಿಮಾ ತೆರೆ ಕಾಣುತ್ತಿರುವ ಬಗ್ಗೆ ಚಿತ್ರತಂಡ ಖುಷಿಯಲ್ಲಿ ಮುಳುಗಿತ್ತು.
‘ನಾನು ಹಲವು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಈ ಸಿನಿಮಾ ನಿಜಕ್ಕೂ ಸವಾಲಿನಿಂದ ಕೂಡಿತ್ತು. ರೈತರ ಸಮಸ್ಯೆ ಸುತ್ತವೇ ಕಥೆ ಹೆಣೆಯಲಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರು ನೋಡುವ ಚಿತ್ರ ಇದು’ ಎಂದರು ಮಯೂರ್ ಪಟೇಲ್.
ಐಎಎಸ್ ಹುದ್ದೆ ತ್ಯಜಿಸಿ ಕೃಷಿ ಮೂಲಕ ಮಾದರಿ ರೈತನಾಗುವ ಹುಡುಗನ ಕಥೆ ಇದು. ಮಯೂರ್ ಅವರು ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಆಯಾ ವಯೋಮಾನಕ್ಕೆ ತಕ್ಕಂತೆ ದೈಹಿಕ ಸಾಮರ್ಥ್ಯವನ್ನು ಸರಿದೂಗಿಸಿಕೊಂಡು ನಟಿಸಿದ್ದೇನೆ. ಪ್ರೀತಿ, ಕಾಮಿಡಿಯೂ ಇದರಲ್ಲಿದೆ. ಈ ಪಾತ್ರದ ಮೂಲಕ ನನ್ನ ಜವಾಬ್ದಾರಿಯನ್ನೂ ಅರಿತುಕೊಂಡೆ’ ಎಂದರು.
‘ವ್ಯವಸಾಯವೇ ಗ್ರಾಮೀಣರ ಮೂಲಕಸುಬು. ಆದರೆ, ಗ್ರಾಮೀಣ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸ್ವಾಭಿಮಾನದ ಬದುಕು ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು ನಿರ್ಮಾಪಕ ಬಿ.ಎಂ. ರಮೇಶ್.
ಅಕ್ಷತಾ ಶ್ರೀಧರ್ ಶಾಸ್ತ್ರಿ ಈ ಚಿತ್ರದ ನಾಯಕಿ. ಇದು ರೈತರ ಕಥೆಯಾಗಿರುವುದರಿಂದ ಬಹುತೇಕ ಚಿತ್ರೀಕರಣವನ್ನು ಗ್ರಾಮೀಣ ಪರಿಸರದಲ್ಲಿಯೇ ಚಿತ್ರೀಕರಿಸಲಾಗಿದೆಯಂತೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ರೋಹಿತ್ ಸೋವರ್ ಸಂಗೀತ ಸಂಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.