ಅದು ಎರಡು ವರ್ಷದ ಹಿಂದಿನ ಘಟನೆ. ಜೆ.ಪಿ. ನಗರದಲ್ಲಿ ಇರುವ ಸುದೀಪ್ ಮನೆಯ ಮುಂದೆ ತಮ್ಮ ಮೆಚ್ಚಿನ ನಟನ ಹುಟ್ಟಹಬ್ಬದ ಆಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳ ಜೊತೆಗೆ ದಿನವಿಡೀ ಕಾಲಕಳೆದು, ಅವರ ಅಭಿಮಾನದಲ್ಲಿ ಮಿಂದೆದ್ದ ಸುದೀಪ್ ರಾತ್ರಿ 9.30ಗಂಟೆಗೆ ಕುಟುಂಬ ಸಮೇತ ಊಟಕ್ಕೆ ಹೊರಟರು.
ಮನೆಯ ಗೇಟ್ ದಾಟಿದ ಕಾರು ಸರ್ರನೇ ಬಲಕ್ಕೆ ತಿರುಗಿತು. ಮನೆಯ ಉದ್ದಕ್ಕೂ ಕಟೌಟ್ಗಳು, ಹೂವಿನ ಹಾರಗಳು ಬಿದ್ದಿದ್ದವು. ಜೊತೆಗೆ, ತರಹೇವಾರಿ ಕೇಕ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದವು. ರಸ್ತೆಯ ಬೀದಿಯೊಂದರಲ್ಲಿ ನೆಲದ ಮೇಲೆ ಬಿದ್ದಿದ್ದ ಕೇಕನ್ನು ಕಂಗಳಲ್ಲಿ ಮಗು ಎತ್ತಿಕೊಂಡಿದ್ದ ಮಹಿಳೆಯೊಬ್ಬರು ತಿನ್ನುತ್ತಿದ್ದರು. ಆ ದೃಶ್ಯ ಕಿಚ್ಚನ ಮನಸ್ಸನ್ನು ವಿಚಲಿತಗೊಳಿಸಿತು.
ಇದನ್ನೂ ಓದಿ:ಕನ್ನಡದ ‘ಪೈಲ್ವಾನ್’ಗೆ ಯು/ಎ ಪ್ರಮಾಣ ಪತ್ರ
ಆ ದೃಶ್ಯ ಸುದೀಪ್ ಒಂದು ಗಟ್ಟಿಯಾದ ನಿರ್ಧಾರ ತಳೆಯಲು ನಾಂದಿ ಹಾಡಿತು. ‘ನೀವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಕೇಕ್, ಹೂವಿನ ಹಾರಗಳನ್ನು ತರುತ್ತೀರಿ. ಬೀದಿಯಲ್ಲಿ ಅದು ಅನುಪಯುಕ್ತವಾಗಬಾರದು. ಸಮಾಜದಲ್ಲಿರುವ ಅಸಹಾಯಕರಿಗೆ ಆ ಹಣದಲ್ಲಿ ಸಹಾಯ ಮಾಡಿ. ಇನ್ನು ಮುಂದೆ ನಾನೆಂದಿಗೂ ಜನ್ಮ ದಿನದ ಸಂಭ್ರಮಾಚರಣೆ ಮಾಡುವುದಿಲ್ಲ’ ಎಂದು ಸುದೀಪ್ ಟ್ವೀಟ್ ಮಾಡಿದರು. ಇಂದಿಗೂ ಅದನ್ನು ಪಾಲಿಸುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದ ಹಲವು ನಟರಿಗೆ ಪ್ರೇರಣೆಯೂ ಆಗಿದೆ.
ಆದರೆ, ಜನ್ಮ ದಿನದಂದು ತಮ್ಮ ಮನೆಯ ಬಳಿಗೆ ಬರುವ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡುವುದನ್ನು ಅವರು ತಪ್ಪಿಸುವುದಿಲ್ಲ.
ಅಂದಹಾಗೆ ಸೆಪ್ಟೆಂಬರ್ 2 ಸಮೀಪಿಸುತ್ತಿದೆ. ಅಂದು ಸುದೀಪ್ ಅವರ ಜನ್ಮ ದಿನ. ಅವರ ಪತ್ನಿ ಪ್ರಿಯಾ ಟ್ವಿಟರ್ನಲ್ಲಿ ಕಿಚ್ಚನ ಜನ್ಮ ದಿನದ ಹಿನ್ನೆಲೆಯಲ್ಲಿ ಅಪ್ಲೋಡ್ ಮಾಡಿರುವ ಸುದೀಪ್ ಕೈಮುಗಿಯುತ್ತಿರುವ ಕಲಾಕೃತಿ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.